ಭಾನುವಾರ, ಡಿಸೆಂಬರ್ 27, 2009

ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?


ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...? ಹೀಗೊಂದು ಸಂಶಯ ಮೂಡಿದ್ದು ಮೊನ್ನೆ ಪುತ್ತೂರು ಕ್ಷೇತ್ರದ ಮಾನ್ಯ ಶಾಸಕಿಯಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಯಿಂದ !. ತಾನು ಶಾಸಕಿಯಾಗಿ ಆಯ್ಕೆಯಾದ ನಂತರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಬಾಯ್ಬಿಟ್ಟ ಮಲ್ಲಿಕಾ ಪ್ರಸಾದ್ ತನ್ನದೇ ಸರ್ಕಾರದ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀ ಮುಮ್ತಾಜ್ ಅಲೀಖಾನ್ ರವರ ಬಳಿ ಕೇಳಿದ್ದು ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯ ಎಷ್ಟು ಎಂದಾಗಿತ್ತು. ತನ್ನ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ವಿಧಾನ ಮಂಡಲ ಅಧಿವೇಶನ ಒಂದು ಅತ್ತ್ಯುತ್ತಮ ವೇದಿಕೆ. ಆದರೆ ಇಲ್ಲಿ ಒಬ್ಬ ಶಾಸಕಿ ತನ್ನ ದೀರ್ಘಕಾಲದ ಮೌನದ ನಂತರ ಮೊದಲ ಪ್ರಶ್ನೆ ಕೇಳಿದ್ದು ರಾಜ್ಯದ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳ ಬದಲು ಈ ರಾಜ್ಯದ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ? ಎಂಬುವುದಾಗಿತ್ತು.

ವಾಸ್ತವವಾಗಿ ನೋಡುವುದಾದರೆ ಈ ಪ್ರಶ್ನೆಯೇ ಬಾಲಿಶವಾದದ್ದು. ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ಯಾವುದೇ ಮಂದಿರ ಅಥವಾ ಮಸೀದಿಗಳು ಆರ್ಥಿಕ ಲಾಭದ ಉದ್ದೇಶದಿಂದ ನಿರ್ಮಿಸಲ್ಪಟ್ಟವಲ್ಲ. ಅದೂ ಅಲ್ಲದೆ ಇವುಗಳಲ್ಲಿ ಹೆಚ್ಚಿನವು ಸರ್ಕಾರದ ಯಾವುದೇ ಸಹಾಯವಿಲ್ಲದೆ ಭಕ್ತರ ದೇಣಿಗೆಯಿಂದ ನಿರ್ಮಾಣವಾದಂತಹವುಗಳು. ಇಲ್ಲಿ ಭಕ್ತರು ತಮ್ಮಲ್ಲಿರುವ ದೈವಭಕ್ತಿಯಿಂದ ತಮ್ಮ ದುಡಿಮೆಯ ಒಂದು ಪಾಲನ್ನು ದೇಣಿಗೆ ರೂಪದಲ್ಲಿ ಕೊಟ್ಟು ಆರಾಧನಾಲಯಗಳನ್ನು ನಿರ್ಮಿಸಿ ಅಲ್ಲಿ ಪ್ರಾರ್ಥಿಸುವುದರ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇವುಗಳ ನಿರ್ಮಾಣ ಮನುಷ್ಯನ ಧಾರ್ಮಿಕ ನಂಬಿಕೆಗಳಿಗೆ ಸಂಭಂದಿಸಿದೆಯೇ ಹೊರತು ಇಲ್ಲಿ ಯಾವುದೇ ಲಾಭದ ಉದ್ದೇಶವಿರುವುದಿಲ್ಲ.

ಆದರೂ ಕೆಲವು ಪ್ರಭಾವಿ ವ್ಯಕ್ತಿಗಳು ಕೆಲವು ಧಾರ್ಮಿಕ ಸ್ಥಳಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಆ ಮೂಲಕ ಕೋಟ್ಯಾಂತರ ರೂಗಳನ್ನು ಸಂಪಾದಿಸುವುದರ ಜೊತೆಗೆ ಸರ್ಕಾರದ ಕೃಪಾಕಟಾಕ್ಷದಿಂದ ಅನೇಕ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ತೆರೆದು ಆ ಮೂಲಕ ಸರ್ಕಾರದಿಂದ ಮತ್ತು ವಿಧ್ಯಾರ್ಥಿಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುತ್ತಿರುವುದನ್ನು ಕಾಣಬಹುದು. ಅದೂ ಅಲ್ಲದೆ ಇವರು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ಮಾದರಿ ಆಡಳಿತ ನಡೆಸುತ್ತಿರುವುದನ್ನೂ ಕಾಣಬಹುದು. ಇಂತಹ ಆರ್ಥಿಕ ಲಾಭದಾಯಕ ಜೊತೆಗೆ ರಾಜಕೀಯ ಕೃಪಾಕಟಾಕ್ಷವುಳ್ಳ ಧಾರ್ಮಿಕ ಸ್ಥಳಗಳಿಗೆ ನಮ್ಮ ಮುಖ್ಯಮಂತ್ರಿಗಳು ಬಜೆಟ್ಟಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೊಟ್ಟದ್ದನ್ನೂ ನಾವು ಕಾಣಬಹುದು.

ಇವೆಲ್ಲಾ ನಡೆದದ್ದು ಹೆಚ್ಚಾಗಿ ಮಾನ್ಯ ಮಲ್ಲಿಕಾ ಪ್ರಸಾದರ ಪಕ್ಷದ ಆಡಳಿತದ ಸರ್ಕಾರದಲ್ಲಿ. ಹೀಗಿರುವಾಗ ಮಲ್ಲಿಕಾ ಪ್ರಸಾದ್ ಕೇವಲ ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂಬ ಅವರ ಪ್ರಶ್ನೆ ಅವರಲ್ಲಿರುವ ಕೋಮುವಾದಿ ಮನಸ್ಥಿತಿಯಿಂದ ಬಂದ ಪ್ರಶ್ನೆಯೇ ಹೊರತು ಇದರಲ್ಲಿ ಇನ್ನಾವ ಸಮಾಜಸೇವಾ ಉದ್ದೇಶವೂ ಇಲ್ಲ.

ಈ ಪ್ರಶ್ನೆ ಎಷ್ಟು ಬಾಲಿಶವಾದುದೆಂದರೆ ಸರ್ಕಾರಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂದು ಕೇಳಿದ ರೀತಿ ಇದೆ. ಯಾವ ಸಂಸ್ಥೆಗಳು ಜನರ ಹಣದಿಂದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಾಪಿಸಲ್ಪಟ್ಟಿರುತ್ತವೆಯೋ ಅಲ್ಲಿಗೆ ಮತಭೇಧವಿಲ್ಲದೆ ಸಹಾಯ ಮತ್ತು ಸಹಕಾರ ನೀಡಬೇಕಾದುದು ಪ್ರಜ್ಞಾವಂತ ಸರ್ಕಾರದ ಕರ್ತವ್ಯ. ಆದರೆ ಅವುಗಳಲ್ಲಿ ಲಾಭ ಹುಡುಕುವ ಶ್ರೀಮತಿ ಮಲ್ಲಿಕಾ ಪ್ರಸಾದರ ಅರ್ಥಶಾಸ್ತ್ರ ಜ್ಞಾನವನ್ನು ಯಾವ ರೀತಿ ವಿಮರ್ಶಿಸಬೇಕೆಂದು ಬಹುಶ ಖ್ಯಾತ ಅರ್ಥಶಾಸ್ತ್ರಜ್ಞರಿಗೂ ಸಾಧ್ಯವಾಗಲಾರದು. ಕೇವಲ ಒಂದು ಫ್ಯಾಸಿಸ್ಟ್ ಸಂಘಟನೆಯ ಮುಖಂಡನ ಹೆಂಡತಿ ಎಂಬ ಒಂದೇ ಒಂದು ಕಾರಣಕ್ಕಾಗಿ ಶ್ರೀಮತಿ ಶಕುಂತಲಾ ಶೆಟ್ಟಿಯವರ ಟಿಕೆಟ್ ತಪ್ಪಿಸಿ ಪುತ್ತೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಶ್ರೀಮತಿ ಮಲ್ಲಿಕಾ ಪ್ರಸಾದರ ಬಾಯಿಯಿಂದ ಇಂತಹ ಪ್ರಶ್ನೆಗಳನ್ನಲ್ಲದೆ ಇನ್ನ್ಯಾವುದನ್ನು ನಿರೀಕ್ಷಿಸಲು ಸಾಧ್ಯ...

ಮಂಗಳವಾರ, ಡಿಸೆಂಬರ್ 15, 2009

ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?


ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ? ಹೀಗೊಂದು ಪ್ರಶ್ನೆ ಇತ್ತೀಚಿಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಕೇಳಿ ಬರತೊಡಗಿದೆ. ಇದಕ್ಕೆ ರಾಜ್ಯದ ಕೆಲ ಪ್ರಮುಖ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ಒಂದು ಕಾರಣವಾದರೆ ಆಡಳಿತಾರೂಢ ಬಿ.ಜೆ.ಪಿಯಲ್ಲಿ ಇನ್ನೂ ಬೂದಿಮುಚ್ಚಿದ ಕೆಂಡದಂತಿರುವ ಭಿನ್ನಮತ ಇದಕ್ಕೆ ಮತ್ತಷ್ಟೂ ಪುಷ್ಟಿನೀಡುತ್ತಿದೆ.


ಇತ್ತೀಚಿನ ಉದಾಹರಣೆ ತೆಗೆದು ಕೊಂಡರೆ ದೇವೇಗೌಡರು ರಾಜಕೀಯವಾಗಿ ತಮ್ಮ ಬದ್ಧ ವೈರಿ ಎಂದೇ ಗುರುತಿಸಿಕೊಂಡ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಾಳಯದಿಂದ ಮುಖ್ಯಮಂತ್ರಿ ಆಗುವುದಾದರೆ ತಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿ ರಾಜ್ಯ ರಾಜಕಾರಣದ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಪ್ರದೇಶ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಈಗಿನ ಸರ್ಕಾರ ತನ್ನ ಸ್ವಯಂಕೃತ ಅಪರಾಧದಿಂದ ಅಧಿಕಾರ ಕಳೆದುಕೊಂಡರೆ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಸರ್ಕಾರ ರಚನೆಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನೀಡಿರುವ ಹೇಳಿಕೆ ಈ ಬಗೆಗಿನ ಊಹಾಪೋಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.


ಹೇಗಾದರೂ ಮಾಡಿ ಕರ್ನಾಟಕದಲ್ಲಿನ ಬಿ.ಜೆ.ಪಿ. ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಂಕಲ್ಪತೊಟ್ಟಂತೆ ವರ್ತಿಸುತ್ತಿರುವ ಕಾಂಗ್ರೆಸ್ ಹೈಕಮಾಂಡಿನ ವರ್ತನೆ ನೋಡಿದರೆ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಯಲ್ಲಿ ಈಗಾಗಲೇ ತೊಡಗಿರುವಂತೆ ಕಾಣುತ್ತಿದೆ. ಈ ಹಿಂದೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳ ಆಪ್ತರಾಗಿದ್ದ ಗಣಿದೊರೆಗಳ ಮೂಲಕ ಬಿ.ಜೆ.ಪಿ.ಪಕ್ಷದೊಳಗೆ ಬಂಡಾಯವೆಬ್ಬಿಸಿ ಆ ಮೂಲಕ ಬಂಡಾಯವೆದ್ದ ಗುಂಪು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಬಗ್ಗೆ ಯೋಜನೆ ರೂಪುಗೊಂಡಿತ್ತು ಎಂಬುವುದು ರಾಜಕೀಯ ವಲಯದಲ್ಲಿ ಕೇಳಿಬರುವ ಮಾಹಿತಿ. ಆದರೆ ವಿಧಿಯಾಟಕ್ಕೆ ಸಿಕ್ಕಿ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಅಕಾಲಿಕ ಮರಣಕ್ಕೀಡಾಗದೇ ಹೋಗುತ್ತಿದ್ದರೆ ಈವತ್ತಿಗಾಗಲೇ ಈ ಪ್ರಯತ್ನ ಯಶಸ್ವಿಯಾಗಿರುತಿತ್ತು. ಆದರೆ ಅವರ ಅಕಾಲಿಕ ಮರಣ ಈ ಎಲ್ಲಾ ಯೋಜನೆಗಳನ್ನು ತಲೆಕೆಳಗಾಗಿಸಿತು ಎಂಬುವುದು ಈಗೇನೂ ಗುಟ್ಟಾಗಿ ಉಳಿದ ವಿಷಯವಲ್ಲ.


ಆನಂತರ ಕೆಲದಿನಗಳ ಮಟ್ಟಿಗೆ ಈ ವಿಷಯವನ್ನು ಮುಂದೂಡಲಾಗಿತ್ತು. ಆದರೆ ಈಗ ಮತ್ತೆ ಅದಕ್ಕೆ ಜೀವ ಬರತೊಡಗಿದೆ. ಈಗ ಪ್ರಮುಖ ಪಾತ್ರ ಗಣಿದೊರೆಗಳ ಬದಲು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನಾಯಕರು ವಹಿಸುತಿದ್ದಾರೆ. ಬಿ.ಜೆ.ಪಿ.ಯಲ್ಲಿನ ಕೆಲವು ಮತ್ತು ಆ ಪಕ್ಷಕ್ಕೆ ಬೆಂಬಲ ನೀಡಿರುವ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಮೂಲಕ ಸರ್ಕಾರ ರಚನೆಗೆ ಸೂಕ್ತ ಸಮಯದಲ್ಲಿ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿಯೇ ದೇವೇಗೌಡರು ಮತ್ತು ದೇಶಪಾಂಡೆಯವರ ಬಾಯಿಯಿಂದ ಈ ರೀತಿಯ ಮಾತುಗಳು ಕೇಳಿಬರುತ್ತಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


ಗಣಿದೊರೆಗಳ ಅಡ್ಡೆಗಳ ಮೇಲೆ ಮೊನ್ನೆ ಸಿ.ಬಿ.ಐ ನಡೆಸಿದ ದಾಳಿಯ ಹಿಂದೆಯೂ ಇದರ ಕೈವಾಡವಿದೆ. ಯುಡಿಯೂರಪ್ಪನವರೊಂದಿಗೆ ಮುನಿಸಿಕೊಂಡು ಕೊನೆಗೆ ಸುಷ್ಮಾ ಸ್ವರಾಜರ ಒತ್ತಾಯಕ್ಕೆ ಮಣಿದ ಗಣಿದೊರೆಗಳ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ತೆಗೆದು ಕೊಂಡ ನಿಲುವುಗಳು ಇದನ್ನು ನೇರವಾಗಿ ಸೂಚಿಸುತ್ತದೆ. ಈಗಾಗಲೇ ಕೇಂದ್ರ ತನಿಖಾ ತಂಡದಿಂದ ಕಂಗಾಲಾಗಿರುವ ರೆಡ್ಡಿಗಳು ಈ ಮೂಲಕವಾದರೂ ಮುಂದಿನ ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ತಮ್ಮ ಕಡೆ ಬರಲಿ ಎಂಬ ಗುಪ್ತ ಅಜೆಂಡಾ ಇದ್ದರೂ ಇರಬಹುದು. ಇಲ್ಲದಿದ್ದಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಎಚ್ಚರಿಕೆಯೂ ಇರಬಹುದು.


ಒಟ್ಟಿನಲ್ಲಿ ಕರ್ನಾಟಕದ ರಾಜಕೀಯದಲ್ಲಿ ಬಿಸಿ ಏರುತ್ತಿದೆ. ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಗೊತ್ತಾಗಲಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ, ಹೆಚ್.ಡಿ. ರೇವಣ್ಣ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು. ಗಣಿಧಣಿಗಳು ಸಾತ್ ಕೊಟ್ಟರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಜೊತೆ ಬಳ್ಳಾರಿ ಲೋಕಸಭಾ ಸದಸ್ಯೆ ಶಾಂತಾ ಕೇಂದ್ರ ಮಂತ್ರಿಯೂ ಆಗಬಹುದು. ಇಲ್ಲದಿದ್ದರೆ ಹೆಚ್.ಡಿ. ಕುಮಾರಸ್ವಾಮಿಯವರಂತೂ ಕೇಂದ್ರದಲ್ಲಿ ಮಂತ್ರಿಯಾಗುವ ಸಾಧ್ಯತೆ ಹೆಚ್ಚು. ಹಾಗೇನಾದರೂ ಆಗಿ ಕುಮಾರಸ್ವಾಮಿಯವರಿಗೆ ಗಣಿ ಖಾತೆ ಸಿಕ್ಕರೆ ರೆಡ್ಡಿಗಳ ಬೆವರಿಳಿಯುವುದಂತೂ ಸತ್ಯ...


- ಅಶ್ರಫ್ ಮಂಜ್ರಾಬಾದ್.

ಭಾನುವಾರ, ಡಿಸೆಂಬರ್ 13, 2009

ಹಿಂದಿ ಅನುವಾದಿತ ಕನ್ನಡ ಶಾಯರಿಗಳು...

ಕಣ್ಣೀರಿನ ಪ್ರಶ್ನೆ

ಒಂದು ದಿನ ನನ್ನ ಕಣ್ಣೀರು ನನ್ನನ್ನೇ ಕೇಳಿತು
ಪ್ರತಿದಿನ ನೀನು ನನ್ನನ್ನು ಏಕೆ ಕರೆಯುತ್ತೀಯಾ..?
ನಾನು ಹೇಳಿಯೇ ಬಿಟ್ಟೆ
ಪ್ರತಿದಿನ ನಾನು ಅವಳ ನೆನಪು ಮಾತ್ರ ಮಾಡುತ್ತೇನೆ,
ಆಗ ಕರೆಯದೆ ನೀನೇ ಏಕೆ ಬಂದು ಬಿಡುತ್ತೀಯಾ..?



ನನ್ನ ಹೃದಯ

ಅವಳ ಸವಿನೆನಪಿನೊಂದಿಗೆ ನನ್ನ ಹೃದಯವನ್ನು
ಹೇಗೆ ನಾ ಉಲ್ಲಸಿತಗೊಳಿಸಲಿ.....
ಯಾರನ್ನು ನಾ ಮರೆತೇ ಇಲ್ಲವೋ
ಅವಳ ನೆನಪನ್ನು ಪುನಃ ನಾ ಹೇಗೆ ಮಾಡಲಿ...
ನನ್ನ ಹೃದಯವನ್ನು ನನ್ನವಳೇ
ಘಾಸಿಗೊಳಿಸಿದಳು,
ಹೀಗಿರುವಾಗ ಇದರ ಬಗ್ಗೆ ಪರರಲ್ಲಿ
ನಾ ಏನೆಂದು ದೂರು ನೀಡಲಿ....



ಪ್ರೀತಿ ಎಂಬ ಮಾಯೆ

ಯಾರ ಮೇಲೆ ಪ್ರೀತಿ ಇತ್ತೋ
ಆ ಹುಡುಗಿ ನನ್ನವಳಾಗಲಿಲ್ಲ,
ಯಾವ ಕ್ಷಣಕ್ಕಾಗಿ ದಿನರಾತ್ರಿ ಕಾದೆನೋ
ಆ ಕ್ಷಣವೂ ನನ್ನದಾಗಲಿಲ್ಲ,
ಪ್ರೀತಿ ಎಂಬ ಈ ಪದ ಒಂದು
ಮಾಯೆಯೇ ಇರಬೇಕು
ಅವಳಿಗೆ ನಾನು ಸಿಗಲಿಲ್ಲ
ನನಗೆ ಯಾರೂ ಸಿಗಲಿಲ್ಲ...



ಭರವಸೆ

ಗೆಳೆತನದ ಹೂವು ಎಲ್ಲಾ
ಕಾಲದಲ್ಲೂ ಅರಳುತ್ತದೆ,
ಸ್ನೇಹದ ಮೋಡಗಳು ಎಲ್ಲಾ
ಕಾಲದಲ್ಲೂ ಘರ್ಜಿಸುತ್ತದೆ,
ನೀನು ನನ್ನನ್ನು ಪ್ರೀತಿಸು
ಇಲ್ಲವೇ ಪ್ರೀತಿಸದಿರು
ಇದು ಮಾತ್ರ ಸತ್ಯ
ಎಲ್ಲಾ ಕಾಲದಲ್ಲೂ
ನಿನ್ನ ನೆನಪುಗಳ ನಡುವೆಯೇ
ನನಗೆ ಬದುಕಲು ಬರುತ್ತದೆ....



ಆತ್ಮ ವಿಶ್ವಾಸ

ಒಡೆದು ಹೋದ ಕನಸುಗಳನ್ನು
ಪುನಃ ಮರಳಿ ಕಟ್ಟಲು ಬರುತ್ತದೆ,
ಮುನಿಸಿ ಹೋದ ಹೃದಯವನ್ನು
ಪುನಃ ಒಲಿಸಿಕೊಳ್ಳಲೂ ಬರುತ್ತದೆ,
ನೀನು ನನ್ನ ಯಾತನೆ ನೋಡಿ
ಕೊರಗಬೇಡ,
ಯಾತನೆಯ ನಡುವೆಯೂ ನನಗೆ
ಮುಗುಳ್ನಗಳು ಬರುತ್ತದೆ.......

ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..



ಶಂಶೀರ್ ಬುಡೋಳಿ.ಇದು ಈಗ ಕರ್ನಾಟಕದ ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು .ಈಗ ಇವರು ವಾರ್ತಾಭಾರತಿ ಕನ್ನಡ ದೈನಿಕದ ಉಪಸಂಪಾದಕ. ಜೊತೆಗೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ(M.C.J)ಯನ್ನು ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಮಾಡುತಿದ್ದಾರೆ. ಹಾಗೆಯೇ ಮಂಗಳೂರಿನ ಖಾಸಗಿ ವಾಹಿನಿ ‘ಚಾನೆಲ್೯’ನ ನ್ಯೂಸ್ ರೀಡರ್. ವಿವಿಧ ಸಾಮಾಜಿಕ, ಸಾಹಿತ್ಯ ಸಂಘಟನೆಗಳಲ್ಲಿ ಗುರುತಿಸುವಿಕೆ. ೧೧ನೇ ಮಂಗಳೂರು ವಿ.ವಿ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಮರೀಚಿಕೆ ಪೋಟೊ ಕಾಮಿಕ್ಸ್‌ನಲ್ಲಿ ನಟನಾಗಿ ಅಭಿನಯ.ಕಲಾಸತ್ಯ ಪಾಕ್ಷಿಕ, ಪ್ರಸ್ತುತ ಪಾಕ್ಷಿಕದಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುವಿಕೆ. ವಿವಿಧ ಬಹುಮಾನ, ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ.



೨೦೦೮ ನೇ ಸಾಲಿನಲ್ಲಿ ಎಸ್.ಡಿ.ಎಂ ಕಾಲೇಜಿನ ಅತ್ತ್ಯುತ್ತಮ ವಿಧ್ಯಾರ್ಥಿ ಪ್ರಶಸ್ತಿ ಪಡೆದಿರುವ ಇವರು ರಾಷ್ಟ ಮಟ್ಟದ ವಿಚಾರಗೋಷ್ಠಿಯಲ್ಲಿ ಬಾಗವಹಿಸಿದ್ದಾರೆ.ಇವರ ಪ್ರಕಾರ ಇವರು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇಟ್ಟುಕೊಂಡು ಇವರೆಗೆ ಬಂದಂತಹ ಹಾದಿ,ಸೋಲು-ಗೆಲುವಿನ ಹಾದಿ. ಈ ಹಾದಿಯೊಳಗೆ ನಾನು ಬರೆಹದ ಮೂಲಕ ಜನರಿಗೆ ಪರಿಚಯವಾಗುವ ಜೊತೆಗೆ ನನ್ನನ್ನು ಪತ್ರಕರ್ತನಾಗುವಂತೆ ಪ್ರೇರೆಪಿಸಿದ ಊರ ಜನತೆ, ಅಭಿಮಾನಿಗಳ,ಗುರುವರ್ಯರ, ಕುಟುಂಬಿಕರ ಆಶಯ ನನ್ನನ್ನು ಈವರೆಗೆ ಬೆಳೆಸಲು ಕಾರಣ. ಇವರೆಲ್ಲರಿಗೂ ನಾನು ಎಂದೆಂದೂ ಚಿರಋಣಿ ಎನ್ನುತ್ತಾರೆ. ಜೊತೆಗೆ ನಾನು ನನ್ನಷ್ಟಕ್ಕೆ ತಾನು ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿ ಏನನ್ನಾದರೂ ಸಾಧಿಸುವ ಛಲ, ಇರಾದೆ ನನ್ನದು. ಇವರೆಗೆ ನಾನು ಅನುಭವಿಸಿದರಲ್ಲಿ ಹೆಚ್ಚಿನವು ಸೋಲುಗಳೇ.ಈ ಸೋಲುಗಳೇ ನನ್ನನ್ನು ಬೆಳೆಸುತ್ತಿದೆ ಎನ್ನುವ ಇವರು ಸಮಾಜದಲ್ಲಿನ ವಿರೋಧಾಭಾಸಗಳನ್ನು ವಿರೋಧಿಸುವ, ಪತ್ರಕರ್ತನಾಗಿ ನಾನು ಬರೆದ ಬರೆಹಗಳ ಮೂಲಕ ನನ್ನವರ,ನನ್ನ ರಾಜ್ಯದ, ದೇಶದ ಒಡಲಿನ, ಧಾರ್ಮಿಕತೆ ಹಾಗೂ ಬಡವ, ದಲಿತ,ಅಸ್ಪಶ್ಯರ, ಶೋಷಿತರ ಪರ ಧ್ವನಿಯಾಗಲು ಬಯಸುತ್ತೇನೆ ಎನ್ನುತ್ತಾರೆ. ಇವರು ತಮ್ಮ ಬರವಣಿಗೆಗಳಿಗಾಗಿ http://www.shamsheerbudoli.blogspot.com ಎಂಬ ಬ್ಲಾಗ್ ಒಂದನ್ನು ತೆರೆದಿದ್ದು ಅಲ್ಲಿ ಇವರ ಬರಹಗಳನ್ನು ನೋಡಬಹುದು.



- ಅಶ್ರಫ್ ಮಂಜ್ರಾಬಾದ್.

ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..


ಮೊನ್ನೆ ಪತ್ರಿಕೆಯೊಂದರಲ್ಲಿ ಲವ್ ಜಿಹಾದ್ ಕುರಿತ ಲೇಖನ ಓದುತಿದ್ದಾಗ ಕನ್ನಡದ ಇಂದಿನ ಕೆಲ ಮಾಧ್ಯಮಗಳು ಪಾಶ್ಚಾತ್ಯರ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಶೌಚಾಲಯಕ್ಕೆ ಪೇಪರ್ ಬಳಸುವ ಪದ್ಧತಿ ಇದ್ದರೆ ಅದಕ್ಕೂ ನಾಲಾಯಕ್ ಆಗಿರುತಿದ್ದವು ಎಂಬ ವಾಖ್ಯಗಳನ್ನು ಓದಿ ನಿಜಕ್ಕೂ ಸರಿ ಎನಿಸಿತು.


ಇಂದಿನ ಕನ್ನಡದ ಕೆಲ ಮಾಧ್ಯಮಗಳು ಯಾವ ಮಟ್ಟಕ್ಕೆ ಬಂದು ತಲುಪಿವೆ ಎಂದರೆ ಒಂದು ವರದಿಯನ್ನು ತನಗೆ ಹೇಗೆ ಬೇಕೋ ಅದರಂತೆ ಪ್ರಕಟಿಸುತ್ತವೆ. ಇಲ್ಲಿ ಸುದ್ಧಿಯ ಮೂಲ ಯಾವುದು? ಆ ಸುದ್ಧಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುವುದನ್ನು ಅರಿಯುವ ಗೊಡವೆಗೆ ಹೋಗದೆ ಬಲ್ಲ ಮೂಲಗಳು ತಿಳಿಸಿವೆ ಎಂಬ ತಮ್ಮ ಕಪಟ ಮೆದುಳಿನ ವರದಿಯನ್ನು ತುರುಕಿ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಿ ಪ್ರಕಟಿಸಿಬಿಡುತ್ತದೆ. ಇದರಲ್ಲಿ ತನಗಾಗದ ಸಮುದಾಯದ ವ್ಯಕ್ತಿಗಳು ಒಳಗೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ಆ ವರದಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿ ಆ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಕನ್ನಡ ನಾಡಿನ ಎಲ್ಲಾ ಪತ್ರಿಕೆಗಳ ಕುರಿತಲ್ಲ. ಇಂದಿಗೂ ಪತ್ರಿಕಾ ಧರ್ಮವನ್ನು ಗೌರವಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಬಯಸುವ ಪತ್ರಿಕೆಗಳು ನಮ್ಮ ನಡುವೆ ಇದೆ. ಇವುಗಳ ನಡುವೆ ಪತ್ರಿಕಾ ಧರ್ಮದ ಜೊತೆ ತಮ್ಮ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ ಸಮುದಾಯಗಳ ನಡುವೆ ದ್ವೇಷ ಹಚ್ಚುವ ಪತ್ರಿಕೆಗಳೂ ಹೆಚ್ಚಾಗಿವೆ.



ಇತ್ತೀಚಿಗೆ ನಡೆದ ಲವ್ ಜಿಹಾದ್ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ತಮ್ಮ ಮನೆಯ ಮಗಳು ಶೈಲಜಾ ಕಾಣೆಯಾಗಿದ್ದಾಳೆ ಎಂದು ಕ್ರೈಸ್ತ ಕುಟುಂಬವೊಂದು ಚಾಮರಾಜ ನಗರದ ಪೊಲೀಸರಿಗೆ ದೂರು ನೀಡಿ ಅವರನ್ನು ಪತ್ತೆ ಹಚ್ಚುವಂತೆ ಕರ್ನಾಟಕ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತದೆ. ಅದರಂತೆ ಕರ್ನಾಟಕ ಪೊಲೀಸರು ತನ್ನ ಪ್ರಿಯಕರ ಅಜ್ಗರ್ ನೊಂದಿಗೆ ಪರಾರಿಯಾಗಿ ಆತನನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಭಾರತೀಯ ವಿವಾಹ ನೊಂದಣಿ ಸಂಹಿತೆಯಂತೆ ಅಜ್ಗರ್ 21 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು ಆತನ ಪ್ರಿಯತಮೆ ಶೈಲಜಾ 18 ವರ್ಷಗಳಿಗಿಂತಲೂ ಮೇಲ್ಪಟ್ಟವಲಾಗಿದ್ದರೂ ಆಕೆ ತನ್ನ ಸ್ವ ಇಚ್ಛೆಯಿಂದ ತಾನು ಅಜ್ಗರ್ ನನ್ನು ಮದುವೆಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ ಎಂದು ಮುಚ್ಚಳಿಕೆ ಬರೆದು ಕೊಟ್ಟರೂ ಸಾಮಾನ್ಯವಾಗಿ ಇಲ್ಲಿ ಇವರ ಪರವಾಗಿ ಬರಬೇಕಿದ್ದ ತೀರ್ಪನ್ನು ಶೈಲಜಾಲ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕಾರಣ ಮುಂದೂಡಲಾಗುತ್ತದೆ. ಅದರಂತೆ ಕೆಲ ದಿನಗಳ ಮಟ್ಟಿಗೆ ಈ ಜೋಡಿ ಜೊತೆಯಾಗಿ ಇರಬಾರದೆಂದೂ ಅಷ್ಟರ ತನಕ ಈಕೆಯು ತನ್ನ ಹೆತ್ತವರೊಂದಿಗೆ ವಾಸಿಸಬೇಕೆಂದೂ ಕೋರ್ಟ್ ಆದೇಶ ನೀಡುತ್ತದೆ. ಜೊತೆಗೆ ಈಕೆಯ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕುರಿತಂತೆ ತನಿಖೆ ನಡೆಸುವಂತೆಯೂ ಆದೇಶಿಸುತ್ತದೆ.



ಅಬ್ಬಾ ಇಷ್ಟು ಸಾಕಾಗಿತ್ತು ಕನ್ನಡ ನಾಡಿನ ಕೋಮುವಾದಿ ಪತ್ರಿಕೆಗಳಿಗೆ, ತನಿಖಾ ತಂಡದ ಅಧಿಕಾರಿ ಹೈಕೋರ್ಟಿಗೆ ವರದಿ ನೀಡುವ ಮುನ್ನವೇ ಇಲ್ಲಿನ ಪತ್ರಿಕೆಗಳು ತೀರ್ಪು ನೀಡಿ ಬಿಟ್ಟಿದ್ದವು. ಕರ್ನಾಟಕ ಸೇರಿದಂತೆ ಕೇರಳ ರಾಜ್ಯದಲ್ಲಿ ಲವ್ ಜಿಹಾದಿ ಸಂಘಟನೆಗಳು ಸಕ್ರಿಯವಾಗಿವೆ. ಇವರು ಇಂತಿಷ್ಟು ಅನ್ಯ ಧರ್ಮೀಯ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಗುರಿಯೊಂದಿಗೆ ಕಾರ್ಯಾಚರಣೆಗಿಳಿಯುತ್ತಾರೆ. ಇವರಿಗೆ ಇದಕ್ಕಾಗಿ ವಿದೇಶಗಳಿಂದ ಲಕ್ಷಗಟ್ಟಲೆ ಹಣ ಬರುತ್ತದೆ. ಸ್ಥಳೀಯವಾಗಿ ಇವರಿಗೆ ಬೈಕು ಕಾರು ಮತ್ತು ಉತ್ತಮ ಉಡುಪುಗಳನ್ನು ಒದಗಿಸಲಾಗುತ್ತದೆ. ಹೀಗೆ ಬುಟ್ಟಿಗೆ ಬಿದ್ದ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಿ ಅವರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೊಂಡ ಯುವತಿಯರು ಆತ್ಮಾಹುತಿ ಬಾಂಬರುಗಳಾಗಿ ಮಾರ್ಪಾಡಾಗುತಿದ್ದಾರೆ ಎಂಬ ತಮ್ಮ ಎಂದಿನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಬ ಮಾಹಿತಿಯನ್ನು ಸೇರಿಸಿ ವರದಿ ತಯಾರಿಸಿ ಬಿಟ್ಟವು. ಇದನ್ನೇ ಕಾಯುತಿದ್ದ ಕೆಲವು ನಾಯಕರು ಮತ್ತು ಸಂಘಟನೆಗಳು ಈ ವಿಷಯವನ್ನು ಬೀದಿಗೆ ತಂದವು. ಬೇಟಿ ಬಚಾವೋ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಬೊಬ್ಬಿಡಲಾರಂಭಿಸಿದವು. ಒಟ್ಟಿನಲ್ಲಿ ಈ ರೀತಿಯ ವರದಿಗಳಿಂದ ನಾಗರೀಕ ಸಮಾಜ ಕಂಗೆಟ್ಟಿತ್ತು. ಇದುವರೆಗೂ ಜಿಹಾದ್ ಎಂದರೆ ಬಾಂಬು ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಕೊಂಡಿದ್ದ ನಾಗರೀಕರೂ ಈ ಹೊಸ ಜಿಹಾದಿನ ಹೆಸರು ಕೇಳಿ ಬೆವೆತು ಹೋದರು. ಈ ಬಗ್ಗೆ ಮೊಬೈಲ್ ಫೋನಿನಲ್ಲಿ ಬಗೆಬಗೆಯ ಎಸ್.ಎಂ.ಎಸ್ ಗಳು ಹರಿದಾಡಿದವು. ಒಟ್ಟಿನಲ್ಲಿ ನಾಗರೀಕ ಸಮಾಜವೇ ಈ ರೀತಿಯ ವರದಿಗಳಿಂದ ಬೆವೆತು ಹೋಗಿದ್ದರೆ ಇದರ ನಿರ್ದೇಶಕರಾದ ಈ ಪೀತ ಪತ್ರಿಕೆಗಳ ಸಂಪಾದಕರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಮಜಾ ನೋಡುತಿದ್ದರು.



ಈ ಎಲ್ಲದರ ನಡುವೆ ಮತ್ತೆ ಕೋರ್ಟಿನ ಆದೇಶದಂತೆ ಶೈಲಜಾ ಮತ್ತೆ ಹಾಜರಾದಳು. ಕೋರ್ಟ್ ಆಕೆಯನ್ನು ಪುನಃ ಪ್ರಶ್ನಿಸಲಾಗಿ ಆಕೆ ತಾನು ಅಸ್ಗರಿನೊಂದಿಗೆ ಹೋಗುವುದಾಗಿಯೂ ತನಗೆ ಯಾವುದೇ ರೀತಿಯ ಆಮಿಷ ಒಡ್ಡಿ ಆತ ತನ್ನನ್ನು ಮದುವೆ ಆಗಿಲ್ಲವೆಂದೂ ತಾವಿಬ್ಬರೂ ಪರಸ್ಪರ ಪ್ರೀತಿಸುತಿದ್ದು ಇಬ್ಬರೂ ಇಷ್ಟಪಟ್ಟು ಮದುವೆ ಆಗಿರುವುದಾಗಿಯೂ ತಿಳಿಸಿ ಜೊತೆಗೆ ತನ್ನಿಷ್ಟದಂತೆ ತಾನು ಅಸ್ಗರಿನ ಧರ್ಮಕ್ಕೆ ಮತಾಂತರವಾಗುತ್ತಿರುವುದಾಗಿಯೂ ತಿಳಿಸಿದಳು. ಅದರಂತೆ ಘನವೆತ್ತ ನ್ಯಾಯಾಲಯ ಆಕೆಗೆ ಅಸ್ಗರಿನೊಂದಿಗೆ ಇರುವಂತೆ ತೀರ್ಪು ನೀಡಿತು. ಈ ಮಧ್ಯೆ ತನಿಖೆ ನಡೆಸಿದ ಇಲ್ಲಿನ ಪೋಲಿಸ್ ಅಧಿಕಾರಿಗಳು ಲವ್ ಜಿಹಾದ್ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲವೆಂದೂ ಇದುವರೆಗೆ ಆ ರೀತಿಯ ಯಾವುದೇ ದೂರು ರಾಜ್ಯದ ಯಾವುದೇ ಮೂಲೆಯಲ್ಲಿ ದಾಖಲಾಗಿಲ್ಲವೆಂದು ವರದಿ ನೀಡಿದರು. ಆದರೆ ಇದು ಹೆಚ್ಚಿನ ಯಾವುದೇ ಪತ್ರಿಕೆಗಳ ಮುಖಪುಟ ಸುದ್ಧಿಯಾಗಲಿಲ್ಲ. ಲವ್ ಜಿಹಾದ್ ಬಗ್ಗೆ ತನಗಿಷ್ಟ ಬಂದಂತೆ ಬರೆದ ಈ ಪೀತಪತ್ರಿಕೆಗಳು ಈಗ ಜಾಣ ಮೌನಕ್ಕೆ ಶರಣಾದವು. ಇವೆಲ್ಲರ ಮಧ್ಯೆ ಮೋಹನ್ ಕುಮಾರ್ ಎಂಬ ಕಾಮ ಜಿಹಾದಿಯ ಪತ್ತೆಯ ನಂತರ ಆತನ ಕಾಮ ಲೀಲೆಗಳಿಗೆ ಆತನ ಹತ್ಯೆಗಳಿಗೆ ಯಾವುದೇ ಟೈಟಲ್ ಕೊಡದೆ ಸರಳವಾಗಿ ಸರಣಿ ಹಂತಕ ಮೋಹನ್ ಕುಮಾರ್ ಬಂಧನ ಎಂದು ಪ್ರಕಟಿಸಿ ಕೃತಾರ್ಥವಾದವು. ಇವೆಲ್ಲಾ ನೋಡುವಾಗ ಈ ಪತ್ರಿಕೆಗಳು ಟಾಯ್ಲೆಟ್ ರೋಲ್ ಆಗಿ ಬಳಸಲೂ ನಾಲಾಯಕ್ ಎಂಬ ಮಾತುಗಳು ಅಕ್ಷರಸ ಸತ್ಯ ಎನಿಸುತ್ತದೆ.

ಗುರುವಾರ, ನವೆಂಬರ್ 12, 2009

ಸಂವಿಧಾನದ ಮಾನ ಕಳೆದ ಕಪಾಳಮೋಕ್ಷ


ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹದು.ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವೊಂದರ ವಿಧಾನಸಭೆಯಲ್ಲಿ ರಾಷ್ಟ್ರ ಭಾಷೆ ಹಿಂದಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರೆಂಬ ಕಾರಣಕ್ಕಾಗಿ ಪ್ರಜಾಪ್ರತಿನಿಧಿಯೊಬ್ಬನಿಗೆ ವಿಧಾನ ಭವನದ ಒಳಗೆ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಹಲ್ಲೆ ನಡೆಸಿ ಕೊನೆಗೆ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕೆಲವು ದುಷ್ಟ ರಾಜಕೀಯ ಪಕ್ಷಗಳಿಂದಾಗಿ ನಮ್ಮ ದೇಶ ಯಾವ ರೀತಿಯ ಸಂಸ್ಕೃತಿಯೆಡೆಗೆ ವಾಲುತ್ತಿದೆ ಎಂಬುವುದನ್ನು ಸೂಚಿಸುತ್ತದೆ. ಈ ಘಟನೆ ಸಮಾಜವಾದಿ ಪಕ್ಷದ ಮುಖಂಡ ಶ್ರೀ ಅಬೂಹಾಶಿಂ ಆಜ್ಮಿ ಮೇಲೆ ನಡೆದ ಹಲ್ಲೆ ಅಲ್ಲ, ಇದು ರಾಷ್ಟ್ರವೊಂದರ ಸಂಸ್ಕೃತಿಯ ಮೇಲೆ, ಅಲ್ಲಿನ ಪ್ರಜಾಪ್ರಭುತ್ವದ ಮೇಲೆ ಅಲ್ಲಿನ ರಾಷ್ಟ್ರಭಾಷೆಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.

ಮೊನ್ನೆ ವಿಧಾನಸಭಾ ಅಧಿವೇಶನ ಆರಂಭವಾಗುವ ಮುನ್ನವೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಎಲ್ಲಾ ಶಾಸಕರೂ ಮರಾಠಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಇಲ್ಲದಿದ್ದರೆ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಥೇಟ್ ತಾಲಿಬಾನಿಗಳ ತರಹ ಎಚ್ಚರಿಕೆ ನೀಡಿದ್ದರು.ಅದರಂತೆ ಆಡಳಿತ ಪಕ್ಷ ಕಾಂಗ್ರೆಸ್ ಸೇರಿ ಇತರ ಎಲ್ಲಾ ಪಕ್ಷದ ಶಾಸಕರೂ ಮರಾಠಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ ಠಾಕ್ರೆಯ ಈ ಎಚ್ಚರಿಕೆಯನ್ನು ಮೊದಲೇ ಖಂಡಿಸಿದ್ದ ಮತ್ತು ಸಂವಿಧಾನಾತ್ಮಕವಲ್ಲದ ಶಕ್ತಿಗಳ ಬೆದರಿಕೆಗೆ ತಾನು ಜಗ್ಗುವುದಿಲ್ಲವೆಂದು ಘೋಷಿಸಿದ ಸಮಾಜವಾದಿ ಪಕ್ಷದ ಮುಖಂಡ ಅಬೂಹಾಶಿಂ ಆಜ್ಮಿ ಸಂವಿಧಾನಾತ್ಮಕವಾಗಿ ರಾಷ್ಟ್ರಭಾಷೆ ಹಿಂದಿಯಲ್ಲಿ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದ್ದರು. ಹೀಗಿದ್ದೂ ಅಲ್ಲಿನ ಸರ್ಕಾರ ವಿಧಾನಸಭೆಯ ಒಳಗೆ ಸೂಕ್ತ ಭದ್ರತಾ ಕ್ರಮಗಳನ್ನು ಏರ್ಪಡಿಸದೆ ಒಬ್ಬ ಜನಪ್ರತಿನಿಧಿಯೊಬ್ಬನ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸುವಂತಹ ಘಟನೆಗೆ ಪರೋಕ್ಷವಾಗಿ ಕಾರಣವಾಗುವುದರ ಜೊತೆಗೆ ದೇಶದ ಮಾನವನ್ನು ಬಹಿರಂಗವಾಗಿ ವಿಶ್ವದ ಮುಂದೆ ಕಳೆಯಲು ಕಾರಣವಾಯಿತು .ಒಬ್ಬ ಜನಪ್ರತಿನಿಧಿಯೊಬ್ಬನ ಮೇಲಿನ ಹಲ್ಲೆಯನ್ನು ಅದೂ ವಿಧಾನ ಸಭೆಯ ಒಳಗೆ ತಡೆಯಲಾಗದ ನೂತನ ಸರ್ಕಾರ ಮಹಾರಾಷ್ಟ್ರದ ಜನತೆಗೆ ಯಾವ ರೀತಿಯ ರಕ್ಷಣೆ ನೀಡಬಲ್ಲದು ಎಂಬ ಸಂಶಯವನ್ನೂ ಹುಟ್ಟುಹಾಕುವಂತೆ ಮಾಡಿತು.

ಇಲ್ಲಿ ಪ್ರಶ್ನೆ ಇರುವುದು ಭಾಷೆಯದ್ದಲ್ಲ ಮತಬ್ಯಾಂಕಿನದು. ಮರಾಠಿ ಜನಗಳ ಭಾಷಾಪ್ರೇಮವನ್ನು ದುರುಪಯೋಗಪಡಿಸಿಕೊಂಡು ಆಕ್ರಮಣಕಾರಿ ಹೇಳಿಕೆಗಳ ಮೂಲಕ ಮರಾಠಿ ಮತಬ್ಯಾಂಕ್ ಸೃಷ್ಟಿಸಿಕೊಂಡ ರಾಜ್ ಠಾಕ್ರೆ ಮರಾಠಿ ಜನರ ಮನಗೆಲ್ಲಲು ಮತ್ತೆ ಈ ರೀತಿಯ ನೀಚ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಅಖಂಡ ಭಾರತವನ್ನು ಭಾಷೆಯ ಹೆಸರಿನಲ್ಲಿ ಒಡೆಯುವ ರಾಷ್ಟ್ರದ್ರೋಹಿ ಕೆಲಸ ಎಂದೇ ಪರಿಗಣಿಸಬೇಕಾಗುತ್ತದೆ. ರಾಜ್ಯ ಮತ್ತು ಭಾಷೆಗಳಿಗಿಂತಲೂ ರಾಷ್ಟ್ರ ಮುಖ್ಯ .ನೆರೆಯಲ್ಲಿ ಚೀನಾ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳು ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುತಿದ್ದರೆ ಭಾರತೀಯರಾದ ನಾವು ಏಕತೆಯಿಂದ ಬಲಿಷ್ಠ ರಾಷ್ಟ್ರ ಕಟ್ಟುವ ಬದಲು ಭಾಷೆಯ ಹೆಸರಿನಲ್ಲಿ ಪರಸ್ಪರ ಜಗಳಕ್ಕೆ ನಿಂತರೆ ಇದರಿಂದ ರಾಷ್ಟಕ್ಕೆ ಅಪಾಯವೇ ಹೆಚ್ಚು.ಸೌಹಾರ್ದ ಭಾರತದ ಕಲ್ಪನೆಯೊಂದಿಗೆ ಸ್ವಾತಂತ್ಯ್ರ ತಂದುಕೊಟ್ಟ ಮಹನೀಯರು ಸುಗಮ ಆಡಳಿತಕ್ಕಾಗಿ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿದರು. ಅವರಲ್ಲಿ ಅಧಿಕಾರದ ವಿಕೇಂದ್ರೀಕರಣದ ಕಲ್ಪನೆ ಇತ್ತು.ಭಾರತದ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಈ ಮಾದರಿ ಉತ್ತಮವೆಂದೇ ಅವರು ಭಾವಿಸಿದ್ದರು. ಅದು ಸರಿ ಕೂಡಾ ಆಗಿತ್ತು. ಆದರೆ ರಾಜ್ ಠಾಕ್ರೆಯಂತಹ ಪುಂಡರು ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ರಾಷ್ಟ್ರವನ್ನು ಭಾಷೆಯ ಆಧಾರದ ಮೇಲೆ ವಿಭಜಿಸುತ್ತಿರುವುದು ಖಂಡನೀಯವಾಗಿದೆ.

ಇದುವರೆಗೆ ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆದು ತಮ್ಮ ಮತಬ್ಯಾಂಕ್ ಸೃಷ್ಠಿಸಿಕೊಳ್ಳುತಿದ್ದ ರಾಜಕಾರಣಿಗಳು ಈಗ ಭಾಷೆಯ ಆಧಾರದ ಮೇಲೆ ರಾಷ್ಟ್ರದ ಏಕತೆಗೆ ದಕ್ಕೆ ತರುತ್ತಿರುವುದು ಶೋಭೆ ತರುವಂತಹದ್ದಲ್ಲ. ಸರ್ಕಾರ ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು. ಇಲ್ಲದಿದ್ದರೆ ಇದು ಮುಂದೆ ಹೆಮ್ಮರವಾಗಿ ಮತ್ತೊಂದು ರೀತಿಯ ಖಾಲಿಸ್ತಾನ್ ಚಳುವಳಿಯನ್ನು ಹುಟ್ಟುಹಾಕಬಹುದು.ಅದಕ್ಕೆ ಅವಕಾಶ ಕೊಡದೆ ರಾಷ್ಟೀಯ ಭದ್ರತಾ ಕಾಯ್ದೆಯಡಿ ಇಂತಹ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಮೂಲಕ ರಾಷ್ಟ್ರ ಒಡೆಯುವ ಶಕ್ತಿಗಳಿಗೆ ಸೂಕ್ತ ಎಚ್ಚರಿಕೆಯನ್ನು ಕೊಡಬೇಕು.


ಹಿಂದೆ ಕರ್ನಾಟಕದ ವಿಧಾನಸಭೆಗೆ ಬೆಳಗಾವಿ ಭಾಗದಿಂದ ಆಯ್ಕೆಯಾಗಿ ಬರುತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಅವರ ಪಕ್ಷದ ರುಮಾಲನ್ನು ತಲೆಗೆ ಸುತ್ತಿಕೊಂಡು ವಿಧಾನಸಭೆಗೆ ಬಂದು ಅಲ್ಲಿ ಮರಾಠಿಯಲ್ಲಿ ಮಾತನಾಡುವುದರ ಜೊತೆಗೆ ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗುತಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಬಹಿರಂಗವಾಗಿ ಕೂಗುತಿದ್ದರು.ಇದು ರಾಜ್ಯ ದ್ರೋಹದ ಕೆಲಸ.ಇಲ್ಲಿ ಅವರು ರಾಜ್ಯದ ಭಾಷೆ ಅಥವಾ ರಾಷ್ಟ್ರದ ಭಾಷೆಯನ್ನು ಬಳಸುದುವುದನ್ನು ಬಿಟ್ಟು ಅನ್ಯ ಸಂಸ್ಥಾನದ ಭಾಷೆಯನ್ನು ಬಳಸುತಿದ್ದರು.ವಿಚಿತ್ರವೆಂದರೆ ಇಂತಹ ರಾಜ್ಯದ್ರೋಹದ ಕೆಲಸಕ್ಕೆ ಬಾಳಾಠಾಕ್ರೆ,ರಾಜ್ ಠಾಕ್ರೆ ಆದಿಯಾಗಿ ಮಹಾರಾಷ್ಟ್ರದ ಇತರ ಪಕ್ಷಗಳ ರಾಜಕಾರಣಿಗಳು ಬೆಂಬಲ ಕೊಡುತಿದ್ದರು.ಆದರೆ ಈಗ ತಮ್ಮ ಸಂಸ್ಥಾನದಲ್ಲಿ ಭಾರತ ದೇಶದ ರಾಷ್ಟ್ರಭಾಷೆಯ ಬಳಕೆ ಅವರಿಗೆ ಬೇಡ.ಇಂತಹ ರಾಜಕಾರಣಿಗಳಿಗೆ ಏನನ್ನಬೇಕು? ಇಂತಹ ಹೊಲಸು ರಾಜಕಾರಣದಿಂದಲೇ ದೇಶ ಇಂದು ಅಧೋಗತಿಗಿಳಿಯುತ್ತಿರುವುದು.


ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರಿಗೆ ಕರ್ನಾಟಕದ ವಿಧಾನಸಭೆಯಲ್ಲಿ ಕಪಾಳಮೊಕ್ಷದಂತಹ ಘಟನೆ ನಡೆಯಲಿಲ್ಲ.ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇವರ ಮಹಾರಾಷ್ಟ್ರ ಪರ ಧೋರಣೆ ಖಂಡಿಸಿ ಸಂವಿಧಾನಾತ್ಮಕವಾಗಿ ಸದನದಲ್ಲಿ ಪ್ರತಿಭಟನೆ ಮಾಡುತಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಆಗಿದ್ದು ಮಾತ್ರ ನಾಚಿಕೆಗೇಡು. ಈ ಘಟನೆ ಭಾರತದ ಏಕತೆಗೆ ಭಂಗ ತರುವಂತಹದ್ದು, ಇದರಿಂದ ದೇಶದ ಘನತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿಯುವಂತಾಯಿತು.ನಮ್ಮ ಜನಗಳು ಇಂತಹ ಸಂವಿಧಾನ ವಿರೋಧಿ ಶಕ್ತಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿಕಳುಹಿಸುವ ಮೂಲಕ ತಮಗೆ ತಾವೇ ಅವಮಾನಿಸಿಕೊಂಡಿದ್ದಾರೆ. ಇವರ ಈ ನೀಚ ಕೆಲಸಕ್ಕಾಗಿ ಈ ನಾಲ್ವರು ಶಾಸಕರನ್ನು ಮುಂದಿನ ನಾಲ್ಕು ವರ್ಷಗಳ ಕಾಲ ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಜನಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಡಬೇಕಾಗಿದ್ದ ಶಾಸಕರು ಸ್ವತಹ ಇನ್ನು ನಾಲ್ಕು ವರ್ಷ ವಿಧಾನಸಭೆ ಪ್ರವೇಶಿಸುವಂತಿಲ್ಲ. ಹೀಗಾದಾಗ ಆ ಕ್ಷೇತ್ರದ ಪಾಡೇನಾಗಬೇಕು? ಒಟ್ಟಿನಲ್ಲಿ ಇಂತಹ ಶಾಸಕರನ್ನು ಆಯ್ಕೆ ಮಾಡುವ ನಾವು ಮೊದಲು ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿದೆ.


- ಅಶ್ರಫ್ ಮಂಜ್ರಾಬಾದ್.

ಶನಿವಾರ, ಅಕ್ಟೋಬರ್ 31, 2009

ಯಡ್ಡಿ - ರೆಡ್ಡಿ ಜಗಳದ ನಡುವೆ ಕನ್ನಡಮ್ಮನ ರಾಜ್ಯೋತ್ಸವ....


ನಾಡಿನ ಜನತೆ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ ರಾಜ್ಯದ ರಾಜಕೀಯದಲ್ಲಿ ಉಂಟಾದ ಬಿರುಗಾಳಿಯಿಂದಾಗಿ ರಾಜಕಾರಣಿಗಳು ರಾಜ್ಯೋತ್ಸವಕ್ಕಿಂತಲೂ ಹೆಚ್ಚಾಗಿ ರಾಜಕೀಯ ಬದಲಾವಣೆಗಳ ಬಗ್ಗೆ ಹೆಚ್ಚು ಚಿಂತಿತರಾಗಿರುವುದು ಈ ಬಾರಿಯ ರಾಜ್ಯೋತ್ಸವದ ವೈಶಿಷ್ಟ್ಯ ಅನ್ನಬಹುದು. ಅದು ಕನ್ನಡ ನಾಡಿನ ಜನತೆಯ ಪಾಲಿಗೆ ದುರದೃಷ್ಟಕರವೂ ಹೌದು. ಈಗಾಗಲೇ ರಾಜ್ಯಾದ್ಯಂತ ಉಂಟಾದ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿಪಾಲಾಗಿದ್ದರೆ ಅಲ್ಲಿ ಹಬ್ಬುತ್ತಿರುವ ಸಾಂಕ್ರಾಮಿಕ ರೋಗಗಳಿಂದ ಪ್ರತಿದಿನ ನೂರಾರು ಜನರು ರೋಗ ಪೀಡಿತರಾಗುತಿದ್ದಾರೆ. ನೆರೆ ಪೀಡಿತ ಜನರ ಕಷ್ಟ ದುಖಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಕಾರ್ಯೋನ್ಮುಖರಾಗಬೇಕಿದ್ದ ಸರ್ಕಾರ ಮತ್ತು ರಾಜಕಾರಣಿಗಳು ಆ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈ ಸಂಧರ್ಭದಲ್ಲಿ ಕುರ್ಚಿ ಕಿತ್ತಾಟದಲ್ಲಿ ತೊಡಗಿರುವುದು ಪ್ರಜ್ಞಾವಂತ ನಾಗರಿಕರು ಸರ್ಕಾರದ ಬಗ್ಗೆಯೇ ಅಸಹ್ಯ ಪಡುವಂತಾಗಿದೆ.


ನೆರೆ ಬಂದ ಕೂಡಲೇ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ನೀಡುವ ನೆರವಿನ ಬಗ್ಗೆ ವಾದ ವಿವಾದ ನಡೆಸಿದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಆ ಕ್ಷಣ ನಾಡಿನ ಜನರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾದವು. ಇದೇ ಸಂಧರ್ಭವನ್ನು ರಾಜಕೀಯವಾಗಿ ಬಹು ಚಾಣಾಕ್ಷತೆಯಿಂದ ಉಪಯೋಗಿಸಿಕೊಂಡ ಯಡಿಯೂರಪ್ಪ ಪಾದ ಯಾತ್ರೆ ನಡೆಸುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡುವುದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಈ ಮೂಲಕ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಇವರ ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಜನ ಮನ್ನಣೆಗೂ ಪಾತ್ರವಾಯಿತು. ಅದಕ್ಕೆ ಅಲ್ಲಿ ಹರಿದು ಬಂದ ಕೋಟ್ಯಾಂತರ ರೂಪಾಯಿಗಳೇ ಸಾಕ್ಷಿ. ನಾಡಿನ ಮಾಧ್ಯಮಗಳು ಪೈಪೋಟಿಗಿಳಿದವರಂತೆ ಈ ಪಾದಯಾತ್ರೆಯ ಬಗ್ಗೆ ರಂಗು ರಂಗಿನ ಸುದ್ಧಿಗಳನ್ನು ಪ್ರಕಟಿಸಿದವು. ಆ ಕ್ಷಣಗಳಲ್ಲಿ ಜನತೆಯ ಪಾಲಿಗೆ ಯಡಿಯೂರಪ್ಪ ನಿಜವಾದ ಹೀರೋ ತರಹ ಕಾಣಿಸಿಕೊಂಡರು. ಆದರೆ ಅದೆಲ್ಲಾ ಕೆಲವೇ ದಿನಗಳಲ್ಲಿ ಮಣ್ಣುಪಾಲಾಯಿತು.



ಇನ್ನೇನು ನೆರೆ ಪೀಡಿತ ಸಂತ್ರಸ್ತರ ಪುನರ್ವಸತಿ ಆರಂಭವಾಗುತ್ತದೆ ಅಂದು ಕೊಂಡಾಗಲೇ ರಾಜ್ಯದ ರಾಜಕೀಯದಲ್ಲಿ ಯಡ್ಡಿ ಮತ್ತು ರೆಡ್ಡಿಗಳ ನಡುವಿನ ರಾಜಕೀಯ ಕದನ ಆರಂಭವಾಯಿತು. ಯಾವ ಸರ್ಕಾರ ತನ್ನ ಪ್ರಜೆಗಳ ನೆರವಿಗೆ ಧಾವಿಸಬೇಕಿತ್ತೋ ಯಾವ ಮುಖ್ಯಮಂತ್ರಿ ತನ್ನ ಪ್ರಜೆಗಳಿಗಾಗಿ ಬೆಂಗಳೂರಿನ ರಾಜ ಬೀದಿಗಳಲ್ಲಿ ಡಬ್ಬ ಹಿಡಿದು ಸಂತ್ರಸ್ತರ ನೆರವಿಗೆ ಹಣ ಸಂಗ್ರಹ ಮಾಡಿದರೋ ಆ ಮುಖ್ಯಮಂತ್ರಿ ನೆರೆ ಸಂತ್ರಸ್ತ ಜನಗಳ ನಡುವೆ ಹೋಗಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ತನ್ನ ಕುರ್ಚಿ ಉಳಿಸಲಿಕ್ಕಾಗಿ ವಿಧಾನ ಸೌಧ ಮತ್ತು ಖಾಸಗಿ ರೆಸಾರ್ಟುಗಳಲ್ಲಿ ಕುಳಿತು ಸರ್ಕಾರವನ್ನು ಹೇಗೆ ಉಳಿಸಬೇಕು ಎಂದು ಚರ್ಚಿಸತೊಡಗಿದರು. ಪಕ್ಕದ ಆಂಧ್ರದಲ್ಲಿ ಅಲ್ಲಿನ ನೂತನ ಮುಖ್ಯಮಂತ್ರಿ ರೋಸಯ್ಯ ತನ್ನ ಅನುಭವದ ಕೊರತೆಯ ನಡುವೆಯೂ ನೆರೆ ಪರಿಸ್ಥಿತಿಯನ್ನು ಎದುರಿಸಿದ ರೀತಿಯಿದೆಯಲ್ಲ ಅದು ಮೆಚ್ಚುವಂತಹದು. ಬಹುಶ ದಿವಂಗತ ರಾಜಶೇಖರ ರೆಡ್ಡಿಯವರೂ ಇಷ್ಟು ಸಮರ್ಥವಾಗಿ ಈ ನೆರೆ ಪರಿಸ್ಥಿಯನ್ನು ನಿಭಾಯಿಸುತಿದ್ದರೋ ಎಂಬ ಸಂಶಯವೂ ಮೂಡುವಂತೆ ಬಹು ಚಾಣಾಕ್ಷತೆಯಿಂದ ಇಡೀ ಸರ್ಕಾರವನ್ನೇ ನೆರೆ ಪೀಡಿತ ಸಂತ್ರಸ್ತರ ನಡುವೆ ಕೊಂಡೊಯ್ದರು. ಅಲ್ಲಿ ಈ ವಿಷಯದ ಕುರಿತು ಪಾದಯಾತ್ರೆಯಂತಹ ರಾಜಕೀಯ ಗಿಮಿಕ್ ಗಳು ನಡೆಯಲಿಲ್ಲ. ಸರ್ಕಾರದ ಖಜಾನೆಯಲ್ಲಿದ್ದ ಜನರ ಹಣವನ್ನೇ ಜನರ ಕಲ್ಯಾಣಕ್ಕಾಗಿ ಬಳಸಿಕೊಂಡರು.ಆದರೆ ಇಲ್ಲಿ ನಡೆದದ್ದು ಅದಕ್ಕೆ ತದ್ವಿರುದ್ದ.ಇಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಈ ವಿಷಯದಲ್ಲಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಾ ಕಾಲಹರಣ ಮಾಡಿದರೇ ವಿನಹ ನೆರೆ ಪೀಡಿತರ  ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾದರು.



ಈ ಎಲ್ಲಾ ರಾಜಕೀಯ ದೊಂಬರಾಟಗಳ ನಡುವೆ ನಿಜವಾದ ರೀತಿಯಲ್ಲಿ ಕನ್ನಡ ನಾಡಿನ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕೆಲ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು. ಮಠ, ಮಸೀದಿ, ಚರ್ಚುಗಳು ಇಂತಿಷ್ಟು ಮನೆ ನಾವು ಕಟ್ಟಿ ಕೊಡುತ್ತೇವೆ ಎಂದು ಹೇಳಿದವು. ನಾಡಿನ ಅನೇಕ ಸಂಘಟನೆಗಳು ತಮ್ಮ ಪ್ರತಿನಿಧಿಗಳನ್ನು ಆ ನೆರೆ ಪೀಡಿತ ಜನರ ಸೇವೆಗೆ ಕಳುಹಿಸಿದವು.ಸರ್ಕಾರ ಕಚ್ಚಾಡುತಿದ್ದಾಗ ಸುಮ್ಮನೆ ಕೂರದ ತಮ್ಮ ಸಹೋದರರ ನೆರವಿಗೆ ಧಾವಿಸಿದ ಈ ಕನ್ನಡ ನಾಡಿನ ಸಂಘಟನೆಗಳ ಕಾರ್ಯ ಮೆಚ್ಚುವಂತಹದ್ದೆ. ಒಂದು ರೀತಿಯಲ್ಲಿ ನಾಡಿನ ಸಂಘಟನೆಗಳು ಮತ್ತು ಮಠ ಮಂದಿರ,ಮಸೀದಿ,ಚರ್ಚುಗಳು ಪರ್ಯಾಯ ಸರ್ಕಾರದ ಮಾದರಿಯಲ್ಲಿ ಜನರ ಸೇವೆಗೆ ಧಾವಿಸಿದವು ಎಂದರೂ ತಪ್ಪಾಗಲಾರದು.


ಈ ಎಲ್ಲಾ ಸಮಸ್ಯೆಗಳ ನಡುವೆ ನಾಳೆ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತಿದ್ದೇವೆ.ಈಗಾಗಲೇ ಹಲವು ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವ ತೀರ್ಮಾನ ಕೈಗೊಂಡಿವೆ. ಉತ್ತರ ಕನ್ನಡ ಜನರು ಮನೆ ಮಠ ಕಳೆದು ಕೊಂದು ಆಕಾಶದ ಕೆಳಗೆ ಮಲಗಿರುವಾಗ ಸಂಗೀತ ರಸಮಂಜರಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಹಣ ಪೋಲು ಮಾಡುವ ಬದಲು ಅದನ್ನು ನಮ್ಮ ಸಹೋದರರ ಪುನರ್ವಸತಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡಿವೆ. ಈ ತೀರ್ಮಾನಗಳು ಈ ಸಂಧರ್ಭದಲ್ಲಿ ಸಮಂಜಸವಾಗಿದ್ದು ಸಕಾಲಿಕವಾದುದಾಗಿದೆ. ಜೊತೆಗೆ ಆಂತರಿಕ ಕಿತ್ತಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಉತ್ತರ ಕನ್ನಡದ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ.

ಲವ್+ ಕಾಮ ಜಿಹಾದ್ + ಹತ್ಯೆಯ ಸುತ್ತ ಒಂದು ಸುತ್ತು.



ಜಗತ್ತಿನ ಯಾವುದೇ ಗ್ರಂಥದಲ್ಲೂ ಸಿಗದಂತಹ ಪದವನ್ನು ಇತ್ತೀಚಿಗೆ ಕೇರಳ ಮತ್ತು ಕರ್ನಾಟಕದ ಕೆಲ ಮಾಧ್ಯಮಗಳು ಸೃಷ್ಟಿಸಿದವು. ಅದುವೇ ಲವ್ ಜಿಹಾದ್. ಇದುವರೆಗೆ ಜಿಹಾದ್ ಎಂದರೆ ಕೇವಲ ಬಾಂಬು, ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಜಗತ್ತಿಗೆ ಸಾರಿದ ಈ ಮಾಧ್ಯಮಗಳು ಈಗ ಅದರ ಮುಂದೆ ಪ್ರೀತಿಯನ್ನು ಸೇರಿಸುವುದರ ಮೂಲಕ ಇದಕ್ಕೊಂದು ವಿಚಿತ್ರ ತಿರುವು ನೀಡಲು ಪ್ರಾರಂಭಿಸಿದವು.


ಏನಿದು ಲವ್ ಜಿಹಾದ್... ಕೆಲ ಸಂಘಟನೆಗಳ ಪ್ರಕಾರ ಮುಸ್ಲಿಂ ಸಮುದಾಯದ ಯುವಕರು ಹಣ ಮತ್ತು ಪ್ರೀತಿಯ ಆಮಿಷವೊಡ್ಡಿ ಅನ್ಯ ಸಮುದಾಯದ ಯುವತಿಯರನ್ನು ಮರಳು ಮಾಡಿ ತಮ್ಮ ಬುಟ್ಟಿಗೆ ಹಾಕಿಕೊಂಡು ಆನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳಿಸುತಿದ್ದಾರೆ. ಹೀಗೆ ಮತಾಂತರ ಗೊಂಡ ಯುವತಿಯರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಇದನ್ನೇ ಲವ್ ಜಿಹಾದ್ ಎನ್ನಲಾಗುತ್ತದೆ.ಇದು ಈ ಸಂಘಟನೆಗಳು ಲವ್ ಜಿಹಾದಿಗೆ ನೀಡಿದ ವ್ಯಾಖ್ಯಾನ.
ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಲವ್ ಜಿಹಾದಿಗಳ ಬಂಧನ ಆಗಬೇಕು ಎಂದು ಕೆಲ ಸಂಘಟನೆಗಳು ನಿದ್ರೆ ಮಾಡುತಿದ್ದ ಕರ್ನಾಟಕದ ಪೋಲೀಸರ ಮುಂದೆ ಪ್ರತಿಭಟನೆ ನಡೆಸಿ ನೀವು ನಿದ್ರೆ ಮಾಡಿದ್ದು ಸಾಕು ಇನ್ನಾದರೂ ಎಚ್ಚರಗೊಳ್ಳಿ ಎಂದು ಬೊಬ್ಬಿಟ್ಟವು.ಇದೇ ವಿಷಯದ ಕುರಿತು ಕೆಲ ಮಾಧ್ಯಮಗಳು ಕಪೋಕಲ್ಪಿತ ಕೆಲ ವರದಿಗಳನ್ನು ಪ್ರಕಟಿಸಿದವು. ಈ ರೀತಿಯಾಗಿ ಒಂದು ಸಮುದಾಯವನ್ನು ಗುರಿಯಾಗಿಸಿ ಅವರ ಮೇಲೆ ಆರೋಪ ಹೊರಿಸುತಿದ್ದ ಸಂಧರ್ಭದಲ್ಲಿ ಸಿಕ್ಕಿ ಬಿದ್ದವನೇ ಲವ್+ಕಾಮ ಜಿಹಾದಿ ಮೋಹನ ಆಲಿಯಾಸ್ ಮೋಹನ ಮೊಗೆರ.


ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಈತ ಪ್ರವೃತ್ತಿಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಹೆಣ್ಣು ಮಕ್ಕಳ ಪಾಲಿಗೆ ಕಾಮ ಪಿಶಾಚಿಯಾಗಿದ್ದ. ತನ್ನ ಮೋಹಕ ನಗು ಮತ್ತು ವರಸೆಯ ಮಾತುಗಳಿಂದ ಬಡ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿ ಕೊಳ್ಳುತಿದ್ದ ಈತ ಆನಂತರ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿ ಕೊನೆಗೆ ದೂರದ ಊರಿನಲ್ಲಿ ಸಯನೈಡ್ ಕೊಟ್ಟು ಕೊಲ್ಲುತಿದ್ದ. ಹೀಗೆ ಬಲಿಯಾದವರ ಸಂಖ್ಯೆ ಪೊಲೀಸರಿಗೆ ದೊರೆತ ಮಾಹಿತಿ ಪ್ರಕಾರ ೨೩. ಅದರಲ್ಲಿ ೧೯ ಪ್ರಕರಣಗಳನ್ನು ಈತ ಒಪ್ಪಿಕೊಂಡಿದ್ದಾನೆ. ಪುಣ್ಯಾತ್ಮ ಮೋಹನನ ಕಾಮ ಪೀಪಾಸಿಗೆ ಬಲಿಯಾದ ಹೆಣ್ಣು ಮಕ್ಕಳು ಎಷ್ಟು ಎಂಬ ಲೆಕ್ಕ ಖುದ್ದು ಆತನಿಗೇ ಗೊತ್ತಿಲ್ಲವಂತೆ. ಹೀಗೆ ಅಮಾಯಕ ಹೆಣ್ಣು ಮಕ್ಕಳು ಈತನ ಕಾಮ ಜಿಹಾದಿಗೆ ದೂರದ ಊರುಗಳಿಗೆ ಹೋಗಿ ಬಲಿಯಾಗುತಿದ್ದರೆ ಇತ್ತ ಕೆಲ ಸಂಘಟನೆಗಳು ಇದರ ಬಗ್ಗೆ ಬೇರೆಯೇ ರೀತಿಯ ವ್ಯಾಖ್ಯಾನ ನೀಡಿ ಇದಕ್ಕೆ ಲವ್ ಜಿಹಾದ್ ಎಂಬ ಹೆಸರು ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತಿದ್ದವು.



ಅದುವರೆಗೂ ಸುಮ್ಮನಿದ್ದ ಪೊಲೀಸರು ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಆರಂಭವಾದ ನಂತರ ಒಮ್ಮೆಲೇ ಮೈಮೇಲೆ ದೇವರು ಬಂದವರಂತೆ ಎಚ್ಚರಗೊಂಡು ಈ ಬಗ್ಗೆ ತನಿಖೆಯನ್ನು ಆರಂಭಿಸಿಯೇ ಬಿಟ್ಟರು. ಆಗ ಸಿಕ್ಕವನೇ ಈ ಮೋಹನ ಎಂಬ ಕಾಮದ ಕ್ರಿಮಿ. ಈತನ ಬಂಧನದಿಂದ ಹುಡುಗಿಯರು ಕಾಣೆಯಾಗಿ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಉತ್ತರ ಅದಾಗಲೇ ಸಿಕ್ಕಿತ್ತು. ತಮ್ಮ ಮಕ್ಕಳು ಯಾವನೊಂದಿಗೋ ಓಡಿ ಹೋಗಿ ಜಾತಿ ಕೆಟ್ಟವಲಾಗಿ ಜೀವಿಸಿರಬಹುದು ಎಂದು ಕೊಂಡ ಮಾತಾಪಿತರಿಗೆ ಈತನ ಬಂಧನದ ನಂತರ ತಮ್ಮ ಮಕ್ಕಳು ಜಾತಿಯ ಬದಲು ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದದ್ದು.



ಕರ್ನಾಟಕ ಪೊಲೀಸರು ತಡವಾಗಿಯಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದಾಗಿ ಅನೇಕ ಹೆಣ್ಣು ಮಕ್ಕಳ ಮಾನ ಮತ್ತು ಪ್ರಾಣ ಉಳಿದಿದೆ. ಜೊತೆಗೆ ಈ ವಿಷಯವನ್ನು ದೊಡ್ಡದು ಮಾಡಿ ಇದಕ್ಕೊಂದು ಹೆಸರು ಕೊಟ್ಟು ಕೋಮು ಬಣ್ಣ ಕೊಡಲು ಹೊರಟಿದ್ದ ಕೊಮುವಾದಿಗಳಿಗೂ ಪೊಲೀಸರು ಈ ಬಂಧನದ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ.
ಇನ್ನು ಬಾಕಿ ಇರುವುದು ಕಾನೂನು ಪ್ರಕ್ರಿಯೆ. ಒಂದೋ ಈತನಿಗೆ ಗಲ್ಲಾಗಬಹುದು ಇಲ್ಲವೇ ಈತ ನಿರಪರಾಧಿ ಎಂದು ಬಿಡುಗಡೆ ಹೊಂದಲೂ ಬಹುದು. ಇದಕ್ಕೆ ಕೆಲವು ಕರಿಕೋಟು ತೊಟ್ಟ ವಕೀಲರಿದ್ದಾರೆ. ನ್ಯಾಯದ ಕಣ್ಣಿಗೆ ಮಣ್ಣೆರಚಿ ಇಂತಹ ಹಲವಾರು ದುಷ್ಟರು ಬಿಡುಗಡೆ ಹೊಂದಿದ್ದಾರೆ. ಆದರೆ ಈ ವಿಷಯದಲ್ಲಿ ಹಾಗಾಗಲು ಬಿಡಬಾರದು. ಈತನಿಗೆ ಸೂಕ್ತ ಶಿಕ್ಷೆ ಆದಾಗಲೇ ಈತನ ಕಾಮ ಜಿಹಾದಿಗೆ ಬಲಿಯಾದ ಆ ಹೆಣ್ಣು ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ.

ಶನಿವಾರ, ಅಕ್ಟೋಬರ್ 24, 2009

ಮಮತೆಯ ಮಡಿಲು

ತಾಯ್ನಾಡಿನಿಂದ ಮಿತ್ರನೊಬ್ಬ ಕಳುಹಿಸಿದ್ದ ಎಸ್.ಎಂ.ಎಸ್. ಕೆಲ ಕ್ಷಣ ಮನಸ್ಸನ್ನು ತಾಯಿಯ ಮಡಿಲಲ್ಲಿ ಕಳೆದ ಬಾಲ್ಯದ ನೆನಪುಗಳೆಡೆಗೆ ಕೊಂಡೊಯ್ದಿತ್ತು. ಆ ಎಸ್.ಎಂ.ಎಸ್.ತಾಯಿಯ ಮಮತೆಯ ಕುರಿತಾಗಿದ್ದು ಅದರಲ್ಲಿ ತಾಯಿಯ ಮಮತೆಯ ಕುರಿತು ಹೀಗೆ ಬರೆದಿತ್ತು.

ಒಮ್ಮೆ ಮಳೆಗಾಲದ ಸಮಯದಲ್ಲಿ ಪುಟ್ಟ ಮಗಳು ಮಳೆಯಲ್ಲಿ ನೆನೆದು ಕೊಂಡು ಮನೆಗೆ ಬರುತ್ತಾಳೆ. ಇದನ್ನು ನೋಡಿದ ಆಕೆಯ ಅಣ್ಣ ಆಕೆಗೆ ಏಕೆ ನೀನು ಛತ್ರಿ ತೆಗೆದುಕೊಂಡು ಹೋಗಿಲ್ಲ. ನೋಡು ಆದ ಕಾರಣ ನೀನು ಮಳೆಯಲ್ಲಿ ನೆನೆದು ಕೊಂಡು ಬರಬೇಕಾಯಿತು ಎಂದು ಗದರಿಸುತ್ತಾನೆ. ಅಲ್ಲೇ ಪಕ್ಕದಲ್ಲಿದ್ದ ಆಕೆಯ ಅಕ್ಕ ಸಹ ಅವನ ಮಾತಿಗೆ ದನಿಗೂಡಿಸಿ ಮಳೆ ನಿಲ್ಲುವ ವರೆಗೆ ರಸ್ತೆಯ ಬದಿಯ ಯಾವುದಾದರೊಂದು ಸ್ಥಳದಲ್ಲಿ ನಿಂತು ಮಳೆ ನಿಂತ ನಂತರ ಬರಬೇಕಾಗಿತ್ತು ಎಂದು ಇವಳ ವಿರುದ್ಧ ಹರಿಹಾಯ್ದರೆ ಇವಳ ತಂದೆಯೂ ಸಹ ಮಳೆಯಲ್ಲಿ ನೆನೆದು ಒಮ್ಮೆ ನಿನಗೆ ಶೀತ ಆಗಿ ಜ್ವರ ಬಂದು ಮಲಗಿದರೆ ನಿನಗೆ ಗೊತ್ತಾಗುತ್ತದೆ ಎಂದು ಇವಳನ್ನು ಹಿಯಾಲಿಸುತ್ತಾನೆ. ಆದರೆ ಅದೇ ಸಂಧರ್ಭದಲ್ಲಿ ಅಲ್ಲಿದ್ದ ಆಕೆಯ ತಾಯಿ ತನ್ನ ತನ್ನ ಸೆರಗಿನಿಂದ ಮಗಳ ತಲೆಯನ್ನು ಒರೆಸುತ್ತಾ ಮಗಳ ವಿರುದ್ಧ ಹರಿಹಾಯದೆ ಮಗಳು ನೆನೆಯಲು ಕಾರಣವಾದ ಮಳೆಯ ವಿರುದ್ಧವೇ ಹರಿಹಾಯುತ್ತಾಳೆ. ಇದುವೇ ತಾಯಿಯ ಪ್ರೀತಿ. ಇದುವೇ ತಾಯಿಯ ಮಮತೆ.

ನಿಜ.. ತಾಯಿಯ ಪ್ರೀತಿಯೇ ಅಂತಹದ್ದು. ತಾಯಿಯ ಪ್ರೀತಿಯ ಮುಂದೆ ಇನ್ನಾರ ಪ್ರೀತಿಯೂ ಸರಿಸಾಟಿಯಾಗಿ ನಿಲ್ಲಲಾರದು. ತನ್ನ ಪುಟ್ಟ ಕಂದಮ್ಮನನ್ನು ತನ್ನ ಒಡಲಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಯವ್ವನದ ಬಹುಪಾಲು ಜೀವನವನ್ನು ತನ್ನ ಮಕ್ಕಳ ಆರೈಕೆಯಲ್ಲಿ ಕಳೆಯುವ ತಾಯಿಯ ತ್ಯಾಗ ಬಹುದೊಡ್ಡದು. ತನಗೆ ತನ್ನ ಮನೆಯಲ್ಲಿ ಸಂಕಷ್ಟ ಇದ್ದರೂ ಅದನ್ನು ಮಕ್ಕಳ ಬಳಿ ತೋರಿಸದೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಆಹಾರ ತಯಾರಿಸಿ ಅದನ್ನು ತನ್ನ ಮಕ್ಕಳಿಗೆ ಕೊಟ್ಟು ಮಿಕ್ಕುಳಿದರೆ ತಾನು ತಿಂದು ಇಲ್ಲದಿದ್ದರೆ ಹಸಿದ ಹೊಟ್ಟೆಯಲ್ಲೇ ಮಲಗುವ ತಾಯಂದಿರೇ ಹೆಚ್ಚು. ತಾಯಿಯ ಜೀವನವೇ ಅಂತಹದ್ದು. ತಾಯಿಯ ಕುರಿತು ಮತ್ತು ಆಕೆಯ ತ್ಯಾಗದ ಕುರಿತು ಸಂಪೂರ್ಣವಾಗಿ ಬರೆಯಲು ಅಸಾಧ್ಯ ಎಂಬ ನಂಬಿಕೆ ನನ್ನದು. ತಾಯಿಯ ಮಹಿಮೆ ಹಾಗೆ ಇದೆ. ಇದನ್ನು ಪದಗಳಿಂದ ಬರೆದು ಅಥವಾ ಮಾತುಗಳಿಂದ ವರ್ಣಿಸಿ ಹೇಳಲು ಅಸಾಧ್ಯ ಎಂದು ನಾನು ಭಾವಿಸಿದ್ದೇನೆ.

ತನ್ನ ಜೀವನದ ಬಹುಪಾಲು ಸಮಯವನ್ನು ಮಕ್ಕಳ ಆರೈಕೆಯಲ್ಲಿ ಕಳೆದ ತಾಯಿ ತನ್ನ ಮಕ್ಕಳು ಬೆಳೆದು ದೊಡ್ಡವರಾಗಿ ಸಮಾಜದಲ್ಲಿ ಹೆಸರು ಮಾಡಬೇಕು. ಒಳ್ಳೆಯವರಾಗಿ ಬಾಳಬೇಕು ಎಂದು ಕನಸು ಕಾಣುವುದು ಸ್ವಾಭಾವಿಕ. ಆದರೆ ಆ ತಾಯಿಯ ಮಕ್ಕಳು ಬೆಳೆದು ದೊಡ್ಡವರಾದ ನಂತರ ಆಕೆಯ ಬೇಕು ಬೇಡಗಳಿಗೆ ಸ್ಪಂದಿಸದೇ ಆಕೆ ಇವರಿಗೆ ಒಂದು ಭಾರ ಎಂಬ ಕಲ್ಪನೆ ಇಂದಿನ ಆಧುನಿಕ ಮನುಷ್ಯರೆನಿಸಿಕೊಂಡ ಕೆಲವರಿಗೆ ಬರುತ್ತಿರುದನ್ನು ನಾವು ಕಾಣಬಹುದಾಗಿದೆ. ಇದರ ಪರಿಣಾಮವೇ ಇಂದು ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ದಾಶ್ರಮಗಳು. ತಮ್ಮನ್ನು ತನ್ನ ಮಡಿಲಲ್ಲಿ ಹೊತ್ತು ಬೆಳೆಸಿದ ತಾಯಿ ಇಂದು ಹೈಟೆಕ್ ಸಿಟಿಗಳಲ್ಲಿ ಫ್ಯಾನ್ಸಿ ಹೆಂಡತಿ ಮಕ್ಕಳೊಂದಿಗೆ ವಾಸಿಸುವ ಆಕೆಯ ಮಗನಿಗೆ ಒಂದು ರೀತಿಯ ಭಾರವಾಗಿ ಕಾಣುತ್ತಾಳೆ. ಆದ ಕಾರಣ ಆಕೆಯ ಆರೈಕೆಯನ್ನು ತಾನು ನೋಡಿ ಕೊಳ್ಳುವ ಬದಲು ಯಾವುದಾರೊಂದು ವೃದ್ದಾಶ್ರಮಕ್ಕೆ ಆಕೆಯನ್ನು ಸೇರಿಸಿ ಆತ ತನ್ನ ಕೈತೊಳೆದು ಕೊಳ್ಳುತ್ತಾನೆ. ಇದು ಇಂದು ಸಮಾಜದಲ್ಲಿ ಉನ್ನತರೆನಿಸಿಕೊಂಡ ಕೆಲವು ವ್ಯಕ್ತಿಗಳು ಮಾಡುತ್ತಿರುವ ಮಾತೃ ಸೇವೆ.. ನಿಜಕ್ಕೂ ನಾಚಿಕೆಯಾಗಬೇಕು ಇವರಿಗೆ.

ಯಾವ ತಾಯಿಯನ್ನು ನಮ್ಮ ಸಮಾಜ ಗೌರವ ಆದರಗಳಿಂದ ಕಾಣುತಿತ್ತೋ ಅದೇ ತಾಯಿಯನ್ನು ಇಂದಿನ ಬಹುಪಾಲು ಮಕ್ಕಳು ಬೆಳೆದು ದೊಡ್ಡವರಾದ ನಂತರ ತಿರಸ್ಕರಿಸುವ ಪರಿಸ್ಥಿತಿ ಬಂದಿರುವುದು ಸಮಾಜದ ಅಧಪತನಕ್ಕೆ ಸಾಕ್ಷಿ ಎಂದೇ ಹೇಳಬಹುದು. ವೃದ್ದಾಶ್ರಮದಲ್ಲಿರುವ ತಾಯಿಯನ್ನು ಹಬ್ಬ ಹರಿದಿನಗಳಂದು ಹೆಂಡತಿ ಮಕ್ಕಳ ಜೊತೆ ಹೋಗಿ ಕಂಡು ಬಂದು ತಾವು ಏನೋ ಮಹಾನ್ ಮಾತೃ ಸೇವೆ ಮಾಡಿದ್ದೇವೆ ಎಂದು ಭಾವಿಸುವವರೂ ನಮ್ಮಲ್ಲಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳ ಹುಟ್ಟಿದ ಹಬ್ಬ ಮತ್ತು ಇನ್ನಿತರ ಆಚರಣೆಗಳ ನೆಪದಲ್ಲಿ ತಾಯಿ ಇರುವ ವೃದ್ದಾಶ್ರಮದಲ್ಲಿ ಅನ್ನದಾನ ಏರ್ಪಡಿಸಿ ತಾಯಿಯ ಮೇಲಿನ ಕಪಟ ಪ್ರೀತಿ ತೋರ್ಪಡಿಸುವವರೂ ಇದ್ದಾರೆ. ಯಾವ ತಾಯಿ ಇವರಿಗೆ ನಡೆಯಲು ಆಶಕ್ತರಾದಾಗ ಹೊತ್ತು ಕೊಂಡು ಇವರ ಆರೈಕೆ ಮಾಡಿದಲೋ ಅದೇ ತಾಯಿ ಆಕೆ ನಡೆಯಲು ಆಶಕ್ತರಾದಾಗ ಆಕೆಯ ಸೇವೆ ಮಾಡದೆ ಆಕೆಯನ್ನು ವೃದ್ದಾಶ್ರಮಕ್ಕೆ ಸೇರಿಸುವ ಇಂದಿನ ಅಧುನಿಕ ಜನರ ಆಧುನಿಕ ಕಲ್ಪನೆ ತಾಯ್ತನಕ್ಕೆ ಮಾಡುತ್ತಿರುವ ಅಪಮಾನ ಎಂದೇ ಹೇಳಬಹುದು.

ತಾಯಿಯ ಕುರಿತು ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲೂ ಆಕೆಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ವೈದಿಕ ಧರ್ಮದಲ್ಲಿ ಮಾತೃ ದೇವೋಭವ ಎಂದರೆ ಇಸ್ಲಾಂ ಧರ್ಮ ನಿನ್ನ ತಾಯಿಯ ಪಾದದಡಿ ನಿನಗೆ ಸ್ವರ್ಗವಿದೆ ಎಂದು ಹೇಳುತ್ತದೆ. ಇನ್ನಿತರ ಧರ್ಮಗಳಲ್ಲೂ ತಾಯಿಯ ಕುರಿತಾದ ಈ ರೀತಿಯ ವ್ಯಾಖ್ಯೆಗಳಿವೆ. ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿ ನಮ್ಮ ನಡುವೆ ಇಂದಿಗೂ ಜನಪ್ರಿಯ. ನಿಜಕ್ಕೂ ತಾಯಿಯನ್ನು ಪ್ರೀತಿಸದ ಜನ ಆಕೆಯ ವೃದ್ದಾಪ್ಯದಲ್ಲಿ ಆಕೆಯನ್ನು ಆರೈಕೆ ಮಾಡದ ಜನ ಮನುಷ್ಯರಾಗಿದ್ದರೂ ಮನುಷ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ.

ಅಳಬೇಕೋ ಅಥವಾ ನಗಬೇಕೋ

ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಆಪ್ತ ಮಿತ್ರನೊಬ್ಬನ ತಂದೆ ಆರೋಗ್ಯ ಹದಗೆಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೊದಲೇ ಸ್ವಲ್ಪ ವಯಸ್ಸಾದ ವ್ಯಕ್ತಿ. ಸ್ವಲ್ಪ ಮಟ್ಟಿನ ಎದೆನೋವು ಕಾಣಿಸಿಕೊಂಡ ಕಾರಣ ಸ್ಥಳೀಯ ವೈದ್ಯರಲ್ಲಿ ತೋರಿಸಲಾಗಿ ಅವರು ದೊಡ್ಡ ಡಾಕ್ಟರಿಗೆ ತೋರಿಸಲು ಶಿಫಾರಸು ಮಾಡಿದ ಕಾರಣ ಮಂಗಳೂರಿನ ಖ್ಯಾತ ಆಸ್ಪತ್ರೆಯ ಖ್ಯಾತ ವೈದ್ಯರಿಗೆ ತೋರಿಸಲಾಗಿತ್ತು. ಅವರು ಕೆಲವು ದಿನಗಳ ಮಟ್ಟಿಗೆ ಒಳರೋಗಿಯಾಗಿ ದಾಖಲಾಗಲು ಶಿಫಾರಸು ಮಾಡಿದರು. ಅದರಂತೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.


ಯಾರಾದರೂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಅಂತ ಗೊತ್ತಾದ ಕೂಡಲೇ ಸಹೃದಯಿ ನೆಂಟರಿಷ್ಟರು, ಆಪ್ತ ಮಿತ್ರರು ರೋಗಿಯ ಸಂದರ್ಶನಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡುವುದು ವಾಡಿಕೆ. ಅದೇ ರೀತಿ ಇಲ್ಲಿಯೂ ನಡೆಯುತ್ತಿತ್ತು. ಬಹುಪಾಲು ನೆಂಟರಿಷ್ಟರು ಆಗಲೇ ಭೇಟಿ ಕೊಟ್ಟು ಹೋಗಿದ್ದರು. ರೋಗಿಗೆ ಮತ್ತು ಅವರ ಸೇವೆ ಮಾಡಲು ಆಸ್ಪತ್ರೆಯಲ್ಲಿ ಉಳಿದಿದ್ದ ಅವರ ಪತ್ನಿಗೆ ಬೇಕಾದ ಊಟ, ತಿಂಡಿಗಳನ್ನು ಮಂಗಳೂರಿನಿಂದ ಕೆಲವು ಕಿ.ಮೀ. ದೂರದಲ್ಲಿದ್ದ ಅವರ ನೆಂಟರ ಮನೆಯಿಂದ ತರಲಾಗುತ್ತಿತ್ತು. ಅದಕ್ಕಾಗಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಂಧುವೊಬ್ಬನಿಗೆ ಈ ಜವಾಬ್ಧಾರಿ ವಹಿಸಲಾಗಿತ್ತು. ಆತ ಯಥಾಪ್ರಕಾರ ಪ್ರತಿದಿನ ತಿಂಡಿ, ಊಟ ತೆಗೆದು ಕೊಂಡು ಹೋಗಿ ಕೊಟ್ಟು ಬಂದು ಅವರ ಯೋಗಕ್ಷೇಮದ ಬಗ್ಗೆ ಮನೆಯವರಿಗೆ ಮಾಹಿತಿ ನೀಡುತಿದ್ದ.


ಹೀಗಿರುವಾಗ ಒಂದು ದಿನ ಬೆಳಗಿನ ತಿಂಡಿ ಕೊಡಲು ಹೋದವನು ಮನೆಗೆ ಬಂದು ಹೇಳಿದ.. ಮಾವನನ್ನು ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಮಾವ ಹೇಳಿ ಕಳುಹಿಸಿದ್ದಾರೆ ಎಂದು. ಈ ಮಾತು ಕೇಳಿ ನಿನ್ನೆ ತಾನೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಅವರ ಪತ್ನಿ, ಜೊತೆಗೆ ಅವರ ನೆಂಟರಿಷ್ಟರಿಗೆಲ್ಲಾ ಒಂದು ರೀತಿಯ ಶಾಕ್. ಇವರಿಗೆ ಏನಾಯಿತು? ಆರೋಗ್ಯದಲ್ಲಿ ಏನಾದರೂ ಏರುಪೆರಾಗಿರಬಹುದೇ ಎಂಬ ಸಂಶಯವೂ ಆಗಿತ್ತು. ಇಲ್ಲದಿದ್ದರೆ ಈ ಮಾತು ಏಕೆ ಹೇಳಿ ಕಳುಹಿಸಿಯಾರು? ಈ ರೀತಿಯ ಮಾತುಗಳನ್ನು ಅನಾರೋಗ್ಯದಲ್ಲಿ ನರಳುತ್ತಿರುವವರಂತೂ ಹೇಳಿದರೆ ಅದು ಅಶುಭ ಘಟನೆಯ ಸಂಕೇತ ಎಂಬ ಭಾವನೆ ಬರುವುದೂ ಸ್ವಾಭಾವಿಕ. ಆಗ ವಿಚಾರಿಸಲು ಈಗಿನಂತೆ ಮೊಬೈಲ್ ಫೋನ್ ಸಹ ಇಲ್ಲ. ಆಗಲೇ ಅವರ ಮನೆಯಲ್ಲಿ ಅವರ ಪತ್ನಿಯ ಅಳು ತಾರಕಕ್ಕೆ ಏರಿತ್ತು. ಪೇಟೆಯಿಂದ ಕಾರೊಂದನ್ನು ಬಾಡಿಗೆಗೆ ತಂದು ಆಗಲೇ ಎಲ್ಲರೂ ಆಸ್ಪತ್ರೆಗೆ ಹೊರಟರು.

ಆಸ್ಪತ್ರೆಯಲ್ಲಿ ರೋಗಿ ಆರಾಮವಾಗಿಯೇ ಇದ್ದರು. ಅವರ ಮುಖದಲ್ಲಿ ಅಂತಹ ದುಗುಡವೇನೂ ಇರಲಿಲ್ಲ. ಮನೆಯವರ ಗಾಬರಿ ಕಂಡು ಅವರೇ ನೀವೆಲ್ಲಾ ಏಕಿಷ್ಟು ಗಾಬರಿಯಾಗಿದ್ದೀರಿ ಎಂದು ಪ್ರಶ್ನಿಸಲಾಗಿ ಅವರು ನೀವು ಊಟ ತರುವ ಹುಡುಗನ ಕೈಯಲ್ಲಿ ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಹೇಳಿ ಕಳುಹಿಸಿದ ವಿಷಯ ತಿಳಿದು ಗಾಬರಿಯಾಗಿ ಓಡಿ ಬಂದೆವು ಎಂದು ಹೇಳಿದರು. ಇದನ್ನು ಕೇಳಿ ನಕ್ಕ ರೋಗಿ ನಾನು ಹೇಳಿದ್ದು ಆ ಉದ್ದೇಶದಿಂದಲ್ಲ. ಬೆಳಗ್ಗೆಯೇ ಡಾಕ್ಟರ್ ಬಂದಿದ್ದರು. ಪರೀಕ್ಷಿಸಿ ಇಂದು ಸಂಜೆ ಡಿಸ್ಚಾರ್ಜ್ ಆಗಲು ಹೇಳಿದ್ದಾರೆ. ಹೀಗಿರುವಾಗ ನೋಡಲು ಬಾಕಿ ಇರುವವರು ಅದರ ಮುಂಚೆ ಬಂದು ನೋಡಿದರೆ ಒಳ್ಳೆಯದಲ್ಲವ ಎಂಬ ಉದ್ದೇಶದಿಂದ ಹೇಳಿದೆ ಎಂದು ಹೇಳಿದಾಗ ಅಲ್ಲಿದ್ದವರಿಗೊಮ್ಮೆ ಪಿತ್ತ ನೆತ್ತಿಗೇರಿ ಇಳಿದಿತ್ತು. ಇವರ ಒಂದು ಮಾತಿನಿಂದ ಒಮ್ಮೆ ಅಲ್ಲೋಲಕಲ್ಲೋಲವಾಗಿದ್ದ ಇವರ ಮನೆ ಮಂದಿ ಈಗಿನ ಇವರ ಮಾತು ಕೇಳಿ ಅಳಬೇಕೋ ಅಥವಾ ನಗಬೇಕೋ ಎಂದು ತಿಳಿಯದಾದರು. ಕೊನೆಗೆ ಸಂಜೆ ವರೆಗೆ ನಿಂತು ಬಂದ ಅದೇ ಕಾರಿನಲ್ಲಿ ಇವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದು ಕೊಂಡು ಹೋದರು.

ಅಮಾಯಕನ ಕೊಲೆ...


ಯಾವಾಗಲಾದರೊಮ್ಮೆ ಮಂಗಳೂರಿನ ಬಂದರು ರಸ್ತೆಗೆ ಭೇಟಿ ಕೊಟ್ಟರೆ ಆ ಮುಖವನ್ನೊಮ್ಮೆ ನೋಡಲು ಸಿಗುತ್ತಿತ್ತು. ಸ್ವಲ್ಪ ವಯಸ್ಸಾಗಿರುವ ಶಾಂತ ಸ್ವಭಾವದ ವ್ಯಕ್ತಿ ಅವರು. ಧಾರ್ಮಿಕವಾಗಿಯೂ ನಂಬಿಕೆಯುಳ್ಳವರು. ದೈವ ಭಕ್ತರೂ ಕೂಡ. ಬಂದರು ರಸ್ತೆಯಲ್ಲಿ ನನ್ನ ಚಿಕ್ಕಪ್ಪನ ಮಗನ ಅಂಗಡಿ ಇತ್ತು . ಅದರ ಮುಂದೆ ಮಂಗಳೂರಿನ ಪ್ರತಿಷ್ಠಿತ ಬದ್ರಿಯಾ ಕಾಲೇಜು ಇರುವುದು. ಅಲ್ಲಿ ಯಾವಾಗಲಾದರೊಮ್ಮೆ ಇವರನ್ನು ಕಾಣಸಿಗುತ್ತಿತ್ತು. ಸರಳ, ಶಾಂತ ಸ್ವಾಭಾವದ ವ್ಯಕ್ತಿಯಾದ ಇವರ ವೈಯುಕ್ತಿಕ ಪರಿಚಯ ಇಲ್ಲದಿದ್ದರೂ ಮುಖ ಪರಿಚಯವಿತ್ತು. ಆದರೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ ಮೊನ್ನೆ ಅಂತರ್ಜಾಲದಲ್ಲಿ ವಾರ್ತೆಗಳನ್ನು ಓದುತಿದ್ದಾಗಲೇ ಆ ವ್ಯಕ್ತಿಯ ಹೆಸರು ಗೊತ್ತಾದದ್ದು.



ಹೆಸರು ಹಸನ್ ಸಾಹೇಬ್. ಸರಿ ಸುಮಾರು ಅರವತ್ತು ವರ್ಷದ ವಯಸ್ಸಿನವರು.ಬದ್ರಿಯಾ ಕಾಲೇಜಿನ ಕಾವಲುಗಾರ. ಅವರನ್ನು ಯಾರೋ ದುಷ್ಕರ್ಮಿಗಳು ಕಬ್ಬಿಣದ ರಾಡ್ ಮತ್ತಿತರ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು. ಮೇಲ್ನೋಟಕ್ಕೆ ಕೊಲೆಯ ಉದ್ದೇಶ ಪಕ್ಕದ ಅಂಗಡಿಯೊಂದನ್ನು ಕಳ್ಳರು ಲೂಟಿ ಮಾಡುವಾಗ ಇವರು ತಡೆಯಲು ಹೋದ ಕಾರಣದಿಂದ ನಡೆದಿರಬಹುದು ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಸತ್ಯ . ಆದರೆ ಇದರ ನಿಜವಾದ ಹಿನ್ನಲೆ ಆರೋಪಿಗಳನ್ನು ಬಂಧಿಸಿದ ನಂತರವಷ್ಟೇ ಗೊತ್ತಾಗಬಹುದು .ಆದರೆ ಅಷ್ಟೇನೂ ದೃಢ ಕಾಯರಲ್ಲದ ಈ ವ್ಯಕ್ತಿಯನ್ನು ಆ ದುಷ್ಟರು ಕೊಲೆ ಮಾಡಬೇಕಿರಲಿಲ್ಲ . ಸ್ವಲ್ಪ ದೂಡಿದರೆ ಆಚೆ ಕಡೆ ಬಿದ್ದು ಬಿಡುತ್ತಿದ್ದರು. ತನ್ನ ಜೀವನದ ಸಂಧ್ಯಾ ಕಾಲದಲ್ಲಿದ್ದ ಈ ವ್ಯಕ್ತಿಯ ಕೊಲೆ ನಿಜಕ್ಕೂ ಮನನೋಯಿಸುವಂತಹದ್ದು. ಆದರೆ ವಿಧಿ ಈ ರೀತಿ ಇತ್ತೇನೋ...? ಇನ್ನು ಮುಂದೆ ಬದ್ರಿಯಾ ಕಾಲೇಜಿನ ಮುಂದೆ ಕಾಣುತಿದ್ದ ಆ ಹಸನ್ಮುಖಿ ಹಸನ್ ಸಾಹೇಬರ ಮುಖ ಮಾತ್ರ ಯಾವಾಗಲೂ ಕಾಣಸಿಗಲಾರದು.

ಶುಭಾಶಯ ವಿನಿಮಯ ಸಾಂಕೇತಿಕವಾಗುತ್ತಿದೆಯೇ.....

ಕಳೆದ ವರ್ಷದ ವ್ಯಾಲಂಟೈನ್ ದಿನದ ವಿವಾದದ ಬಗ್ಗೆ ತಮಗೆ ಗೊತ್ತಿರಬಹುದು. ಒಂದು ಕಡೆ ವಿರೋಧಿಸುವವರಿದ್ದರೆ ಮತ್ತೊಂದೆಡೆ ಪ್ರೀತಿಸಲು ಬೆಂಬಲಿಸುವವರೂ ಸಾಕಷ್ಟಿದ್ದರು.ಈ ಎಲ್ಲಾ ಪ್ರಹಸನಗಳ ನಡುವೆ ಕೊನೆಗೂ ಪ್ರೀತಿ ಗೆದ್ದಿತು ಅಂತ ನಾಡಿನ ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ಬಿಂಬಿಸಿದವು.ಅದು ನಿಜವೇ ಆಗಿದ್ದು ಇದುವರೆಗೆ ಹಿಂಸೆ ಮತ್ತು ಅಹಿಂಸೆಗಳ ನಡುವೆ ಜಗತ್ತಿನಲ್ಲಿ ಕೊನೆಗೆ ಗೆಲುವು ಕಂಡಿದ್ದು ಅಹಿಂಸೆಯೇ.ಪ್ರೇಮಿಗಳಿಗೆ ಬೆಂಬಲ ಸೂಚಿಸಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೇರಿದ್ದ ನಾಡಿನ ಕೆಲ ಪ್ರಗತಿಪರರು,ರೈತ ಮತ್ತು ಕನ್ನಡ ಹೋರಾಟಗಾರರು ವ್ಯಾಲಂಟೈನ್ ದಿನಕ್ಕೆ ವಿಶೇಷ ಅರ್ಥ ನೀಡಿ ಈ ದಿನ ಕೇವಲ ಹುಡುಗ ಹುಡುಗಿಯರು ಪ್ರೀತಿಸುವ ದಿನವಲ್ಲ.ತಂದೆ,ತಾಯಿ.ಅಣ್ಣ,ತಮ್ಮ,ತಂಗಿ, ಗೆಳೆಯರು ಹೀಗೆ ಯಾರು ಬೇಕಾದರೂ ಈ ದಿನವನ್ನು ಆಚರಿಸಬಹುದು ಎಂದು ಹೇಳುವ ಮೂಲಕ ಈ ದಿನಕ್ಕೊಂದು ಹೊಸ ವ್ಯಾಖ್ಯೆಯನ್ನೇ ನೀಡಿಬಿಟ್ಟರು.

ಇದರಿಂದ ಉತ್ತೇಜಿತರಾಗಿಯೋ ಏನೋ ನನ್ನ ಮಿತ್ರರೊಬ್ಬರು ನನಗೊಂದು ವ್ಯಾಲಂಟೈನ್ ದಿನದ ಶುಭಾಶಯ ಕೋರಿ ಪುಟ್ಟ ಎಸ್.ಎಂ.ಎಸ್. ಒಂದನ್ನು ಕಳುಹಿಸಿದರು. ಈಗಂತೂ ಭಾರತದಲ್ಲಿ ದೂರವಾಣಿ ಸಂಸ್ಥೆಗಳು ಎಸ್.ಎಂ.ಎಸ್. ಸೇವೆಯನ್ನು ಉಚಿತವಾಗಿ ನೀಡುತ್ತಿರುವುದರಿಂದ ದಿನಕ್ಕೆ ಮೊಬೈಲಿಗೆ ಬರುವ ಎಸ್.ಎಂ.ಎಸ್.ಗಳಿಗೇನೂ ಬರವಿಲ್ಲ.ಅದೂ ಅಲ್ಲದೆ ಈಗಿನ ಜನರಂತೂ ತಿಂಗಳಿಗೆ ಆಗಾಗ ಬರುವ ವಿಶೇಷ ದಿನಗಳಂದು ಒಂದೊಂದು ಉಚಿತ ಎಸ್.ಎಂ.ಎಸ್.ಕಳುಹಿಸಿ ಶುಭ ಕೋರುವುದು ಒಂದು ಸಂಪ್ರದಾಯವೇ ಆಗಿಬಿಟ್ಟಂತಿದೆ.ಏನೇ ಆಗಲೀ ಶುಭಾಶಯ ಕೋರಿದ ಮಿತ್ರನಿಗೆ ನಾನು ಋಣಿ.
ಆದರೆ ಈ ಶುಭಾಶಯ ವಿನಿಮಯ ಭಾವನಾತ್ಮಕ ಸಂಬ್ಹಂಧಗಲಿಲ್ಲಧ ಕೇವಲ ಒಂದು ಸಾಂಕೇತಿಕವಾದ ಕ್ರಿಯೆಯಾಗಿ ಮಾರ್ಪಾಡಾಗಿದೆಯೇ ಎಂಬ ಸಂಶಯ ಮೂಡುತ್ತದೆ.


ಏಕೆಂದರೆ ನನಗೆ ಗೊತ್ತಿರುವಂತೆ ಕೇವಲ 10 ರಿಂದ 12ವರ್ಷಗಳ ಹಿಂದಿನ ಮಾತು. ಆಗ ನಾವು ಹೊಸ ವರುಷದ ಸ್ವಾಗತಕ್ಕೆ ಡಿಸೆಂಬರ್ ತಿಂಗಳಿನಲ್ಲೇ ಸಜ್ಜಾಗುತಿದ್ದೆವು. ಆಗಲೇ ನಾವು ಶುಭಾಶಯ ಕೋರಬೇಕಾದ ಗೆಳೆಯರ, ಕುಟುಂಬಿಕರ ಪಟ್ಟಿ ಸಿದ್ಧವಾಗಿಬಿಡುತಿತ್ತು.ಡಿಸೆಂಬರ್ ತಿಂಗಳ ಮಧ್ಯದಲ್ಲೇ ನಗರದ ಗ್ರೀಟಿಂಗ್ ಕಾರ್ಡ್ ಅಂಗಡಿಗಳಿಗೆ ಹೋಗಿ ಅಲ್ಲಿ ನಮಗೆ ಬೇಕಾದ ಗ್ರೀಟಿಂಗ್ ಕಾರ್ಡುಗಳನ್ನು ಆಯ್ಕೆ ಮಾಡಿ ಅದನ್ನು ಮನೆಗೆ ತಂದು ಅದರಲ್ಲಿ ಕಳುಹಿಸಬೇಕಾದವರಿಗೆ ಶುಭಾಶಯಗಳನ್ನು ಮತ್ತು ಅವರ ವಿಳಾಸವನ್ನು ಬರೆದು ಅದನ್ನು ಜೋಪಾನವಾಗಿ ಪೋಸ್ಟ್ ಮಾಡುತಿದ್ದೆವು.ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಕನಿಷ್ಠ 10 ರಿಂದ 15 ದಿನಗಳನ್ನು ತೆಗೆದುಕೊಳ್ಳುತಿತ್ತು.ಈ ದಿನಗಳಲ್ಲಿ ನಮ್ಮ ಮನದಲ್ಲಿ ನಾವು ಕಾರ್ಡ್ ಕಳುಹಿಸಬೇಕಾದ ಗೆಳೆಯರು ಮತ್ತು ಕುಟುಂಬಿಕರು ಮನೆ ಮಾಡಿರುತಿದ್ದರು.ಕಾರ್ಡ್ ಕೊಳ್ಳುವಾಗಿನಿಂದ ಹಿಡಿದು ಅದನ್ನು ಪೋಸ್ಟ್ ಮಾಡುವವರೆಗೆ ನಮ್ಮ ಮನಸ್ಸಿನಲ್ಲಿ ಅವರ ನೆನಪುಗಳು ಆಗಾಗ ಬರುತಿತ್ತು.



ಆದರೆ ಈಗ ಕಾಲ ಬದಲಾಗಿದೆ.ಗ್ರೀಟಿಂಗ್ ಕಾರ್ಡುಗಳ ಬಳಕೆ ಕಡಿಮೆ ಆಗಿದೆ.ಈಗಂತೂ ಮೊಬೈಲ್ ಯುಗ. ವಿಶೇಷ ದಿನದಂದು ಬೆಳಗೆದ್ದು ಆಯಾ ದಿನದ ಶುಭಾಶಯ ಕೋರಿ ಒಂದು ಎಸ್.ಎಂ.ಎಸ್. ಮಾಡಿದರಾಯಿತು.ಇಲ್ಲದಿದ್ದರೆ ಇನ್ನಾರೋ ಕಳುಹಿಸಿದ ಎಸ್.ಎಂ.ಎಸ್. ಅನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಿದರಾಯಿತು.ಈ ರೀತಿಯ ಶುಭಾಶಯ ವಿನಿಮಯದಿಂದ ಸಿಗುವ ಆನಂದ ಕ್ಷಣಿಕವಾಗಿದ್ದು ಇದೊಂದು ಯಾಂತ್ರಿಕ ಕ್ರಿಯೆಯಂತೆ ನಡೆದು ಹೋಗುತ್ತದೆ.



ಕಾಲ ಬದಲಾದಂತೆ ಜನಗಳೂ ಬದಲಾಗಿದ್ದಾರೆ. ಇದು ವೇಗದ ಕಾಲ. ಜನಗಳಿಗೆ ಸಮಯವೇ ಇಲ್ಲ...ಎಲ್ಲವೂ ಫಾಸ್ಟ್ ...ಜನಗಳ ನಡುವೆ ಕುಟುಂಬಿಕರ ನಡುವೆ ಈ ಹಿಂದೆ ಇದ್ದ ಭಾಂಧವ್ಯ ಈಗಿಲ್ಲ.ಹಿಂದಿನಂತೆ ಹಬ್ಬ ಹರಿದಿನಗಳಂದು ನೆಂಟರಿಷ್ಟರ, ಗೆಳೆಯರ ಮನೆಗಳಿಗೆ ಭೇಟಿ ಕೊಡುವ ಸಂಪ್ರದಾಯವಂತೂ ಹಳೆಯದಾಗಿಬಿಟ್ಟಿದೆ. ಇತರ ದಿನಗಳಲ್ಲಿ ಹೋಗಲಿ ಹಬ್ಬದಂದೂ ವಿಶೇಷ ಆಹಾರದ ತಯಾರಿಯೂ ಕಡಿಮೆ. ಅದಕ್ಕೂ ಫಾಸ್ಟ್ ಫುಡ್.ಹೇಗೆ ಈಗಿನ ಜನಗಳು ವೇಗದ ಜೀವನದ ಅನುಕೂಲಕ್ಕಾಗಿ ಸತ್ವರಹಿತವಾದ ಜಂಕ್ ಫುಡ್, ಫಾಸ್ಟ್ ಫುಡ್ ಗಳನ್ನು ನೆಚ್ಚಿ ಕೊಂಡಿದ್ದಾರೋ ಅದೇ ರೀತಿ ಈಗಿನ ವೇಗದ ಶುಭಾಶಯಗಳೂ ಹಿಂದಿನ ಗ್ರೀಟಿಂಗ್ ಕಾರ್ಡುಗಳ ಶುಭಾಶಯಗಳಂತೆ ಸತ್ವಭರಿತವಾಗಿರದೆ ಸತ್ವರಹಿತವಾಗಿರುವುದಂತೂ ಸತ್ಯ..

ಮರುಭೂಮಿಯ ಮಲೆನಾಡು ತಬೂಕ್ ...

ಸೌದಿ ಅರೇಬಿಯಾ ಎಂದೊಡನೆ ನೆನಪಾಗುವುದು ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಮಕ್ಕಾ, ಮದೀನ ಜೊತೆಗೆ ಇಲ್ಲಿನ ಮರಳುಗಾಡುಪ್ರದೇಶ, ಸುಡುಬಿಸಿಲಿನ ವಾತಾವರಣ ಹಾಗೂ ಸಾಧಾರಣ ಗಲ್ಫ್ ರಾಷ್ಟ್ರಗಳಲ್ಲಿರುವಂತೆ ಕೆಲ ಗಗನಚುಂಬಿ ಕಟ್ಟಡಗಳು.


ಇದೇ ರೀತಿಯ ಕಲ್ಪನೆಯೊಂದಿಗೆ ಉದ್ಯೋಗದ ನಿಮಿತ್ತ ತವರು ನಾಡಿನಿಂದ ಹೊರಟ ನಾನು ರಿಯಾದ್ ಮಾರ್ಗವಾಗಿ ವಿಮಾನದ ಮೂಲಕ ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ಬಂದಾಗ ವಿಮಾನದ ಕಿಟಕಿಗಳಿಂದ ಒಣಮರುಭೂಮಿಯ ಬದಲು ಹಸಿರಿನ ದೃಶ್ಯಗಳು ಗೋಚರಿಸುತ್ತಿದ್ದವು. ನಾನಂದುಕೊಂಡಂತೆ ತಬೂಕ್ ನಗರ ಒಣಮರುಭೂಮಿಯಾಗಿರದೆ ಫಲವತ್ತಾದ ಫಲಪುಷ್ಪಗಳಿಂದ ಕಂಗೊಳಿಸುವ ಹಸಿರು ಪ್ರದೇಶವಾಗಿತ್ತು.ಇದುವೇ ಈ ನಗರದ ವಿಶೇಷ.ಇಲ್ಲಿನ ಜನ ಈ ಮರುಭೂಮಿಯಲ್ಲಿ ಖರ್ಜೂರದ ಜೊತೆಗೆ ಟೊಮ್ಯಾಟೋ, ಸೌತೆಕಾಯಿ, ಬದನೆ, ಹಸಿರುಮೆಣಸು, ದ್ರಾಕ್ಷಿ, ಸೇಬು ಸೇರಿದಂತೆ ಹಲವು ಬಗೆಯ ತರಕಾರಿಗಳ ಜೊತೆಗೆ ಕೆಲವು ನಮೂನೆಯ ಪುಷ್ಪಗಳನ್ನೂ ಬೆಳೆದು ತಬೂಕ್ ನಗರವನ್ನು ಕೃಷಿ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.ಹೀಗಾಗಿ ಈ ನಗರದ ಬಗ್ಗೆ ಕೆಲವು ಮಾಹಿತಿಯನ್ನು ಜೊತೆಗೆ ಇಲ್ಲಿನ ವೈಶಿಷ್ಟತೆಯನ್ನು ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.


ಈ ನಗರದ ಪ್ರಮುಖ ವಾಣಿಜ್ಯ ವ್ಯವಹಾರ ಕೃಷಿ ಆಧಾರಿತವಾಗಿದ್ದರೂ ಇಲ್ಲಿನ ಬೇಸಾಯ ಮಳೆ ಆಧಾರಿತವಾಗಿಲ್ಲ.ಇಲ್ಲಿ ವರ್ಷದಲ್ಲಿ ಕೇವಲ 5 ರಿಂದ 6 ಬಾರಿ ಮಾತ್ರ ಮಳೆ ಬರುತ್ತದೆ.ಆದ ಕಾರಣ ಇಲ್ಲಿನ ಕೃಷಿಕರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು ಪಂಪುಸೆಟ್ಟುಗಳ ಮೂಲಕ ತಮ್ಮ ಬೆಳೆಗೆ ನೀರುಣಿಸುತ್ತಾರೆ.ಹೀಗಾಗಿ ಇಲ್ಲಿ ಅಲ್ಲಲ್ಲಿ ಹೆಚ್ಚಾಗಿ ನೀರಿನ ಕೊಳವೆ ಬಾವಿಗಳು ಕಾಣಸಿಗುತ್ತವೆ.ಇಲ್ಲಿ ಬೆಳೆದ ತರಕಾರಿಗಳು ಸೌದಿಯ ವಿವಿಧ ಪ್ರದೇಶಗಳಿಗೆ ಜೊತೆಗೆ ಕೆಲ ಪುಷ್ಪಗಳು ವಿದೇಶಗಳಿಗೂ ರವಾನೆಯಾಗುತ್ತದೆ.ಇಲ್ಲಿನ ಜನ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದು ಕುರಿ,ಆಡು,ಒಂಟೆ ಮತ್ತು ಕೋಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುತ್ತಾರೆ.


ಇಲ್ಲಿನ ಕೃಷಿಕರು ಬೆಳೆದ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆಯಿದ್ದು ಇದಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಗಳಿವೆ.ಅಲ್ಲಿ ರೈತರು ತಾವು ಬೆಳೆದ ವಸ್ತುಗಳನ್ನು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.ಅದೂ ಅಲ್ಲದೆ ಪ್ರತೀ ಶುಕ್ರವಾರ ನಮಾಜಿನ ನಂತರ ಮಸೀದಿಯ ಹೊರಭಾಗದಲ್ಲಿ ಕೃಷಿಕರು ತಾವು ಬೆಳೆದ ವಸ್ತುಗಳನ್ನು ವಾಹನಗಳಲ್ಲಿ ತುಂಬಿ ತಂದು ಮಾರಾಟ ಮಾಡುವ ದೃಶ್ಯವೂ ಇಲ್ಲಿ ಸಾಮಾನ್ಯ.
ರಾಜಧಾನಿ ರಿಯಾದಿನಿಂದ ಸುಮಾರು 1400 ಕಿ.ಮೀ.ದೂರ ಇರುವ ತಬೂಕ್ ನಗರ ಸೌದಿ ಅರೇಬಿಯಾದ ಗಡಿಪ್ರದೇಶವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳಿವೆ.ಅದಲ್ಲದೆ ಈ ನಗರ ಈ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದು ಆದ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೇನಾಪಡೆಯ ಸಮವಸ್ತ್ರ ಧರಿಸಿದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಇಲ್ಲಿನ ಸೈನಿಕರಿಗೆ ಮತ್ತು ನಾಗರಿಕರಿಗೆ ಪರ್ಯಾಯ ಆದಾಯಕ್ಕಾಗಿ ಇಲ್ಲಿನ ಸರ್ಕಾರ ಸ್ಥಳೀಯವಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಮಿನಿಗೂಡ್ಸ್ ಟೆಂಪೋಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ.ಆದ ಕಾರಣ ಇಲ್ಲಿ ಟ್ಯಾಕ್ಸಿಗಳು ಕಾಣಸಿಗುವುದಿಲ್ಲ. ಇಲ್ಲಿನ ನಾಗರೀಕರು ಸ್ಥಳೀಯ ಪ್ರಯಾಣಕ್ಕಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಈ ಟೆಂಪೋಗಳನ್ನು ಆಶ್ರಯಿಸಬೇಕಾಗುತ್ತದೆ.


ಇಲ್ಲಿಂದ ಸುಮಾರು 160 ಕಿ.ಮೀ.ದೂರದಲ್ಲಿ ದುಬಾ ಎಂದು ಕರೆಯಲ್ಪಡುವ ಸಮುದ್ರತೀರ ಪ್ರದೇಶವಿದ್ದು ಅದು ಇಲ್ಲಿನ ನೆಚ್ಚಿನ ಪ್ರವಾಸಿ ತಾಣ.ಇಲ್ಲಿನ ಬೀಚ್ ಸುಂದರವಾಗಿದ್ದು ಸಮುದ್ರವೂ ಸಹ ಅಷ್ಟೆ ಶಾಂತವಾಗಿದೆ.ಹಾಗಾಗಿ ಈ ಬೀಚಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿ ರಜಾದಿನದ ಮಜಾ ಸವಿಯುವುದೇ ಒಂದು ಅವಿಸ್ಮರಣೀಯವಾದ ಅನುಭವವಾಗಿದ್ದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ಇಲ್ಲಿನ ಸಮುದ್ರ ತೀರದಿಂದ ಈಜಿಪ್ಟ್ ದೇಶಕ್ಕೆ ನಾಗರಿಕ ಹಡಗು ಸಾರಿಗೆ ವ್ಯವಸ್ಥೆಯಿದ್ದು ಸಾವಿರಾರು ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಜೊತೆ ಈಜಿಪ್ಟಿಗೆ ಪ್ರಯಾಣಿಸಲು ಸಿದ್ಧರಾಗಿ ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ.


ಪೂರ್ತಿ ಸೌದಿ ಅರೇಬಿಯಾ ಕಡು ಬಿಸಿಲಿಂದ ಧಗಧಗಿಸುತ್ತಿರುವಾಗಲೂ ತಬೂಕಿನ ಹವಾಮಾನ ಇದಕ್ಕೆ ವ್ಯತಿರಿಕ್ತವಾಗಿ ತಂಪಾಗಿರುತ್ತದೆ.ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ನೈಸರ್ಗಿಕವಾದ ತಂಪು ಹವೆಯನ್ನು ಸವಿಯಲು ಇಲ್ಲಿಗೆ ಬರುವವರೂ ಬಹಳಷ್ಟಿದ್ದಾರೆ.ಈ ರೀತಿಯ ಕಾರಣಗಳಿಂದಾಗಿ ಇದು ಸೌದಿ ನಾಗರೀಕರ ನೆಚ್ಚಿನ ತಾಣವಾಗಿದ್ದು ತಾವು ಕೂಡ ಸೌದಿ ಅರೇಬಿಯಾಕ್ಕೆ ಬಂದರೆ ತಬೂಕ್ ಸಂದರ್ಶಿಸಲು ಮರೆಯದಿರಿ.

ಬಾಡದಿರು ಸ್ನೇಹದ ಹೂವೇ.....

ಪ್ರೀತಿ,ಪ್ರೇಮ,ಸ್ನೇಹ,ಕರುಣೆ ಇವು ಮಾನವನ ಪ್ರತ್ಯೇಕವಾದ ಗುಣಗಳು. ಇವುಗಳ ಸಮ್ಮಿಲನವನ್ನೇ ಮಾನವೀಯತೆ ಎಂದು ಕರೆದರೆ ತಪ್ಪಾಗಲಾರದು ಎಂಬುವುದು ನನ್ನ ಅಭಿಪ್ರಾಯ. ಪ್ರೀತಿ,ಪ್ರೇಮ,ವಿಶ್ವಾಸದಿಂದಲೇ ಒಂದು ಸುಭದ್ರ ಸಮಾಜವನ್ನು ಕಟ್ಟಲು ಸಾಧ್ಯವಿದ್ದು ಒಂದು ನಾಡಿನ ಅಭಿವೃದ್ಧಿಯಲ್ಲಿ ಇವು ಮಹತ್ತರ ಪಾತ್ರವನ್ನು ವಹಿಸುತ್ತದೆ ಮತ್ತು ವಹಿಸಿದ ಉದಾಹರಣೆಗಳೂ ಸಾಕಷ್ಟಿವೆ.ಆದರೆ ಏಕೋ ಏನೋ ಈ 2009 ನೇ ವರ್ಷದಲ್ಲಿ ಎಲ್ಲೋ ಒಂದು ಕಡೆ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಕೆಟ್ಟ ದಿನಗಳು ಬರುತ್ತಿದೆಯೇ ಎಂಬ ಭಾವನೆಯನ್ನು ಇತ್ತೀಚೆಗೆ ಕನ್ನಡ ನಾಡಿನಾದ್ಯಂತ ನಡೆಯುತ್ತಿರುವ ಘಟನೆಗಳು ಮನಸ್ಸಿನಲ್ಲಿ ಮೂಡಿಸುತ್ತಿರುವುದಂತೂ ಸತ್ಯ.ಪ್ರೀತಿ ಪ್ರೇಮ ಸೌಹಾರ್ದಕ್ಕೆ ಹೆಸರಾಗಿದ್ದ, ಕುವೆಂಪುರಂತಹ ಮಾನವತಾವಾದಿಗಳು, ಬಸವಣ್ಣನವರಂತಹ ವಚನಕಾರರು, ಸಂತ ಶಿಶುನಾಳಶರೀಫರಂಥ ಸೌಹಾರ್ದಪ್ರಿಯರು ಜನ್ಮತಳೆದ ಈ ನಾಡಿನಲ್ಲಿ ಇಂದು ಮಾನವೀಯತೆಯ ವಿರೋಧಿ ಶಕ್ತಿಗಳು ವಿಜ್ರಂಭಿಸುತ್ತಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ನಾವು ಮಾನವೀಯತೆಯನ್ನು ಮರೆಯುತ್ತಿದ್ದೇವೆಯೇ ಎಂಬ ಸಂಶಯವನ್ನು ಮೂಡಿಸುತ್ತದೆ.



ನಿಜ.. ಇತ್ತೀಚಿಗೆ ಕನ್ನಡ ನಾಡಿನಲ್ಲಿ ನಡೆದ ಘಟನೆಗಳು ಮಾನವನ ಸ್ವಭಾವಕ್ಕೆ ತಕ್ಕುದಾದುದಲ್ಲ. ಮಹಿಳೆಯರ ಮೇಲೆ ನಡೆದ ದಾಳಿ, ಧರ್ಮದ ಹೆಸರಿನಲ್ಲಿ ಧಾರ್ಮಿಕ ಮತಾಂಧರು ನಡೆಸುತ್ತಿರುವ ಧರ್ಮ ವಿರೋಧಿ ಪುಂಡಾಟಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಕಳಂಕಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯನ ನಡುವೆ ಶಾಂತಿ ಹಾಗೂ ಸೌಹಾರ್ದತೆಯನ್ನು ಮೂಡಿಸಬೇಕಾದ ಧರ್ಮಗಳು ಇದು ಮಾನವರ ನಡುವೆ ಕಂದಕ ಮೂಡಿಸುತ್ತಿದೆ. ಪರಸ್ಪರ ಒಟ್ಟಿಗೆ ಜೀವಿಸುತಿದ್ದ ಜನ ಧರ್ಮದ ಹೆಸರಿನಲ್ಲಿ ವಿಭಜನೆಗೊಳ್ಳುತ್ತಿರುವುದು ಧಾರ್ಮಿಕ ಅಧಃಪತನದ ಸಂಕೇತ ಎಂದರೂ ತಪ್ಪಾಗಲಾರದು.



ಧರ್ಮಗಳು ಮಾನವನ ಕಲ್ಯಾಣಕ್ಕಾಗಿ ಸ್ಥಾಪಿತವಾಗಿವೆ. ಯಾವುದೇ ಧರ್ಮ ದ್ವೇಷವನ್ನು ಬಿತ್ತುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಗೆಲ್ಲು ಎಂದೇ ಜಗತ್ತಿನ ಎಲ್ಲಾ ಧರ್ಮಗಳು ಅದರ ಅನುಯಾಯಿಗಳಿಗೆ ಕರೆ ಕೊಡುತ್ತದೆ. ಆದರೆ ಧರ್ಮಗಳಲ್ಲಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಮತಾಂಧ ಶಕ್ತಿಗಳು ಧರ್ಮದ ವ್ಯಾಖ್ಯಾನವನ್ನೇ ತಿರುಚಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದನ್ನು ಕಾಣಬಹುದು. ಮನುಷ್ಯ ಮನುಷ್ಯನ ನಡುವೆ ಭಾಂದವ್ಯ ಮೂಡಿಸಬೆಕಿದ್ದ ಬೇಕಿದ್ದ ಧಾರ್ಮಿಕ ಆಚರಣೆಗಳು ಇಂದು ಒಡಕನ್ನು ಮೂಡಿಸುತ್ತಿದೆ. ದೀಪಾವಳಿಯ ದಿನದಲ್ಲಿ ಹಿಂದೂಗಳ ಜೊತೆ ಸೇರಿ ಹಬ್ಬ ಆಚರಿಸುತ್ತಾ ಪಟಾಕಿ ಹೊಡೆಯುತಿದ್ದ ಮುಸ್ಲಿಮರು, ಈದ್ ಹಬ್ಬಗಳಂದು ಮುಸ್ಲಿಮರ ಮನೆಗಳಲ್ಲಿ ಬಂದು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತಿದ್ದ ಹಿಂದೂಗಳು, ಕ್ರೈಸ್ತರ ಸಾಂತ್ ಮೇರಿ ಹಬ್ಬದ ದಿನ ಇಗರ್ಜಿಗಳಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಲ್ಲುತಿದ್ದ ಎಲ್ಲಾ ಧರ್ಮದ ಜನರು ಈ ರೀತಿಯ ದೃಶ್ಯಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ. ಮನುಷ್ಯ ನಿಧಾನವಾಗಿ ಧರ್ಮದ ಅಮಲಿನಲ್ಲಿ ಮಾನವೀಯತೆಯನ್ನು ಮರೆಯುತ್ತಿರುವುದು ಈ ನಾಡಿನ ದುರಂತ ಎಂದೇ ಹೇಳಬಹುದು.



ಆದರೂ ಒಡೆದು ಹೋಗುತ್ತಿರುವ ಸಮಾಜವನ್ನು ರಕ್ಷಿಸಲು ಬೇಕಾದಷ್ಟು ಜನರು ಅಂದರೆ ಸೌಹಾರ್ದ ಪ್ರಿಯರು ಇಂದಿಗೂ ನಮ್ಮ ನಡುವೆ ಇದ್ದಾರೆ. ಜೊತೆಗೆ ಕನ್ನಡ ಖ್ಯಾತ ಕವಿಗಳೂ, ದಾರ್ಶನಿಕರೂ, ವಚನಕಾರರೂ ಬರೆದ ಸೌಹಾರ್ದ ಸಾಹಿತ್ಯಗಳೂ ಬೇಕಾದಷ್ಟಿವೆ. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಪ್ರಯತ್ನಗಳು ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ ಎಂಬುವುದು ನಿಜವೇ ಆಗಿದ್ದರೂ ಅದಕ್ಕೆ ಬೇಕಾದಂತಹ ಪ್ರಯತ್ನಗಳನ್ನು ಮಾನವ ಪ್ರೇಮಿಗಳು ಮಾಡುತ್ತಿರುವುದಂತೂ ಸತ್ಯ. ಕ್ರಮೇಣ ಕನ್ನಡ ನಾಡು ಕವಿಗಳು ಕಂಡ ಚೆಲುವ ಕನ್ನಡ ನಾಡಾಗಲಿ. ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಬಾಡುತ್ತಿರುವ ಸ್ನೇಹದ ಹೂವು ಮತ್ತೆ ಅರಳಲಿ ಎಂದು ಹಾರೈಸೋಣ. ಜೊತೆ ಜೊತೆಗೆ ನಾವುಗಳೂ ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಮುಂದಾಗೋಣ... ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ...

ನಮ್ಮನ್ನಗಲಿದ ಖ್ಯಾತ ಚಿತ್ರಕಲಾ ಶಿಕ್ಷಕ ಬಿ.ಜಿ.ಮಹಮ್ಮದ್.. (ಒಂದು ನೆನಪು)

ಬಿ.ಜಿ.ಮಹಮ್ಮದ್ ದಕ್ಷಿಣ ಕನ್ನಡ ಜಿಲ್ಲೆಯ ಕಲಾಲೋಕದಲ್ಲೊಂದು ಚಿರಪರಿಚಿತ ಹೆಸರು.ಚಿತ್ರಕಲೆಯನ್ನು ತನ್ನ ಹವ್ಯಾಸವನ್ನಾಗಿಸಿ ಜೊತೆಗೆ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಎಂಬ ಚಿತ್ರಕಲಾ ಶಾಲೆಯನ್ನು ಮಂಗಳೂರಿನ ಕದ್ರಿಯಲ್ಲಿ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿಯನ್ನು ನೀಡಿ ಅಸಂಖ್ಯಾತ ಶಿಷ್ಯರನ್ನು ಸಂಪಾದಿಸಿದ ಬಿ.ಜಿ.ಮಹಮ್ಮದರು ಇತ್ತೀಚಿಗೆ ಅಂದರೆ ಕೆಲವು ತಿಂಗಳ ಹಿಂದೆ ನಿಧನರಾದರು. ಅವರ ಕುರಿತು ಕಿರು ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆ .



ಮಂಗಳೂರಿನ ಸರ್ಕಾರಿ ವೈದ್ಯರಾಗಿದ್ದ ಡಾ: ಮಹಮ್ಮದಾಲಿ ಮತ್ತು ರಹೀಮಾಬಿಯವರ ಮಗನಾಗಿ ಅಕ್ಟೋಬರ್ 11ನೆಯ ತಾರೀಖು 1920 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಬಿ.ಜಿ.ಮಹಮ್ಮದರ ಪೂರ್ಣ ಹೆಸರು ಬೋಳೂರು ಗುಲಾಂ ಮಹಮ್ಮದ್.ಚಿಕ್ಕಂದಿನಿದಲೂ ಚಿತ್ರಕಲೆಯಡೆಗೆ ಆಕರ್ಷಿತರಾಗಿದ್ದ ಬಿ.ಜಿ.ಮಹಮ್ಮದರು ಎಸ್.ಎಸ್.ಎಲ್.ಸಿ.ವಿಧ್ಯಾಬ್ಯಾಸದ ನಂತರ ಉಡುಪಿಯ ಖ್ಯಾತ ಚಿತ್ರಕಲಾ ಗುರುಗಳಾಗಿದ್ದ ಪಡುಕೋಣೆ ಶ್ರೀನಿವಾಸ ರಾವ್ ರವರ ಕಲಾಶಾಲೆಯಲ್ಲಿ ತರಬೇತಿ ಪಡೆದು ಅವರ ಅಚ್ಚುಮೆಚ್ಚಿನ ಶಿಷ್ಯರಾದರು.ಆನಂತರ ಚಿತ್ರಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸತೊಡಗಿದ ಬಿ.ಜಿ.ಮಹಮ್ಮದರು ಅಸಂಖ್ಯಾತ ಚಿತ್ರಗಳನ್ನು ಬಿಡಿಸುವುದರ ಮೂಲಕ ತನ್ನ ಜೀವನವನ್ನು ಕಲಾ ಸೇವೆಗೆ ಮುಡಿಪಾಗಿಟ್ಟರು.
1967ರಲ್ಲಿ ಮೈಸೂರಿನ ಅಖ್ತರ್ ಬೇಗಂ ಎಂಬುವವರನ್ನು ವಿವಾಹವಾದ ಇವರಿಗೆ ಮೂವರು ಗಂಡು ಮಕ್ಕಳು.ಹಿರಿಯ ಮಗ ಶಬ್ಬಿರ್ ಅಲಿ ಚಿಲಿಂಬಿ ಎಂಬಲ್ಲಿ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಚಿತ್ರಕಲಾ ತರಬೇತಿ ನೀಡುತಿದ್ದರೆ ಮತ್ತೊಬ್ಬ ಮಗ ಸಮೀರ್ ಅಲಿ ಕದ್ರಿಯ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಅನ್ನು ಮುನ್ನಡೆಸುತಿದ್ದಾರೆ.ಇವರ ಮತ್ತೊಬ್ಬ ಮಗ ಕಬೀರ್ ಅಲಿ ಆರ್ಕಿಟೆಕ್ ಡಿಸೈನರ್ ಆಗಿದ್ದಾರೆ.


ತುಂಬು ಸಂಸಾರದಲ್ಲಿ ಬಾಳಿ ಬದುಕಿದ ಬಿ.ಜಿ.ಮಹಮ್ಮದರು ಚಿತ್ರಕಲಾ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ಇದುವರೆಗೆ 40,000 ಕ್ಕಿಂತಲೂ ಹೆಚ್ಚು ವಿಧ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡಿದ್ದು ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಲಾವಿದರಲ್ಲೊಬ್ಬರಾದ ಬಿ.ಜಿ.ಮಹಮ್ಮದರ ನಿಧನ ಚಿತ್ರ ಕಲಾಲೋಕಕ್ಕೊಂದು ತುಂಬಲಾರದ ನಷ್ಟ ಎಂದೇ ಹೇಳಬಹುದು.

ಶುಕ್ರವಾರ, ಅಕ್ಟೋಬರ್ 23, 2009

ನಿಯ್ಯತ್ತು .....

ಮೊನ್ನೆ ನಾನಿರುವ ತಬೂಕ್ ಊರಿನಲ್ಲಿ ನಡೆದ ಘಟನೆ. ಬ್ಯಾಂಕಿನ ಎ.ಟಿ.ಎಂ. ಯಂತ್ರದ ಮುಂದೆ ಅನಾತವಾಗಿ ಬಿದ್ದಿದ್ದ ಬ್ಯಾಗೊಂದು ಒಬ್ಬ ಪಿಲಿಫೀನ್ಸಿನ ಹುಡುಗನಿಗೆ ಸಿಕ್ಕಿತು. ಒಂದು ರೀತಿಯ ಕುತೂಹಲದಿಂದ ಆ ಬ್ಯಾಗನ್ನು ತೆರೆದ ಆತ ಒಂದು ಕ್ಷಣ ಗಾಬರಿಯಾದರೂ ತಕ್ಷಣವೇ ಸುಧಾರಿಸಿಕೊಂಡಿದ್ದ. ಆ ಬ್ಯಾಗಿನಲ್ಲಿ ಹಣದ ಕಟ್ಟುಗಲಿತ್ತು. ಫಿಲಿಫೀನಿ ಹುಡುಗ ಆ ಬ್ಯಾಗನ್ನು ನೇರವಾಗಿ ತನ್ನ ರೂಮಿಗೆ ತೆಗೆದು ಕೊಂಡು ಹೋದವನೇ ಅದರಲಿದ್ದ ವಸ್ತುಗಳನ್ನೆಲ್ಲಾ ಜಾಲಾಡಿದ. ಅದರಲ್ಲಿ ಸಿಕ್ಕ ಮೊಬೈಲ್ ನಂಬರ್ ಒಂದಕ್ಕೆ ಕಾಲ್ ಮಾಡಿದ ಆತ ಅದರ ಮಾಲೀಕನಿಗೆ ಈ ವಿಷಯ ತಿಳಿಸಿದ. ಜೊತೆಗೆ ಪೊಲೀಸರಿಗೂ ಮಾಹಿತಿ ಕೊಟ್ಟ .


ಹಾಗೂ ಹೀಗೂ ಮಾಲಿಕನನ್ನು ಹುಡುಕಿದ ಮೇಲೆ ಪೋಲೀಸರ ಮಧ್ಯಸ್ಥಿಕೆಯಲ್ಲಿ ಆ ಹಣವನ್ನು ಅದರ ಮಾಲೀಕನಿಗೆ ಹಿಂದಿರುಗಿಸಿದ. ಅದರಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಸೌದಿ ರಿಯಾಲ್ ಹಣ ಇತ್ತು. ಹಣ ಪಡೆದ ಮಾಲೀಕ ಧನ್ಯವಾದ ಹೇಳಿದ. ಸಿಕ್ಕಿದ್ದನ್ನೆಲ್ಲಾ ದೋಚುವ ಇಂದಿನ ಕಾಲದಲ್ಲಿ ಆ ಹುಡುಗ ನಿಯತ್ತಿಗೆ ಒಂದು ಮಾದರಿಯಾಗಿದ್ದ. ಈ ವಿಷಯ ಇಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ ಬಂತು. ಫಿಲಿಫೀನ್ಸಿನ ಕೆಲ ಸಂಘಟನೆಗಳು ಆತನನ್ನು ಸನ್ಮಾನಿಸಿದವು. ಸನ್ಮಾನ ಸಮಾರಂಭದಲ್ಲಿ ಆತನನ್ನು ಹೊಗಳಿದರು. ಅದರ ನಂತರ ಕೆಲವರು ಆತನ ಜೊತೆಗಿನ ಖಾಸಗಿ ಮಾತು ಕತೆಯಲ್ಲಿ ಏಕೆ ಹಣ ವಾಪಾಸು ಕೊಟ್ಟೆ ಎಂಬ ತಮ್ಮ ದುರ್ಬುದ್ದಿಯನ್ನು ಆತನ ಜೊತೆ ಹೇಳಿದರು. ಆದರೆ ಆ ಹುಡುಗ ಈ ರೀತಿಯ ಮಾತುಗಳಿಗೆ ನಗು ಮುಖದಿಂದಲೇ ತಲೆ ಅಲ್ಲಾಡಿಸುತಿದ್ದ. ಅವನನ್ನು ನೋಡಿದಾಗ ಆತನ ಮುಖದಲ್ಲಿನ ಮುಗ್ಧತೆಯೇ ಹೇಳುತಿತ್ತು

 ಆತ ಒಂದೂವರೆ ಲಕ್ಷ ಅಲ್ಲ ಒಂದೂವರೆ ಕೋಟಿ ಸಿಕ್ಕರೂ ವಾಪಾಸ್ಸು ಕೊಡುತಿದ್ದ ಅಂತ.....