ಮಂಗಳವಾರ, ಡಿಸೆಂಬರ್ 15, 2009

ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?


ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ? ಹೀಗೊಂದು ಪ್ರಶ್ನೆ ಇತ್ತೀಚಿಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಕೇಳಿ ಬರತೊಡಗಿದೆ. ಇದಕ್ಕೆ ರಾಜ್ಯದ ಕೆಲ ಪ್ರಮುಖ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ಒಂದು ಕಾರಣವಾದರೆ ಆಡಳಿತಾರೂಢ ಬಿ.ಜೆ.ಪಿಯಲ್ಲಿ ಇನ್ನೂ ಬೂದಿಮುಚ್ಚಿದ ಕೆಂಡದಂತಿರುವ ಭಿನ್ನಮತ ಇದಕ್ಕೆ ಮತ್ತಷ್ಟೂ ಪುಷ್ಟಿನೀಡುತ್ತಿದೆ.


ಇತ್ತೀಚಿನ ಉದಾಹರಣೆ ತೆಗೆದು ಕೊಂಡರೆ ದೇವೇಗೌಡರು ರಾಜಕೀಯವಾಗಿ ತಮ್ಮ ಬದ್ಧ ವೈರಿ ಎಂದೇ ಗುರುತಿಸಿಕೊಂಡ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಾಳಯದಿಂದ ಮುಖ್ಯಮಂತ್ರಿ ಆಗುವುದಾದರೆ ತಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿ ರಾಜ್ಯ ರಾಜಕಾರಣದ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಪ್ರದೇಶ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಈಗಿನ ಸರ್ಕಾರ ತನ್ನ ಸ್ವಯಂಕೃತ ಅಪರಾಧದಿಂದ ಅಧಿಕಾರ ಕಳೆದುಕೊಂಡರೆ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಸರ್ಕಾರ ರಚನೆಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನೀಡಿರುವ ಹೇಳಿಕೆ ಈ ಬಗೆಗಿನ ಊಹಾಪೋಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.


ಹೇಗಾದರೂ ಮಾಡಿ ಕರ್ನಾಟಕದಲ್ಲಿನ ಬಿ.ಜೆ.ಪಿ. ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಂಕಲ್ಪತೊಟ್ಟಂತೆ ವರ್ತಿಸುತ್ತಿರುವ ಕಾಂಗ್ರೆಸ್ ಹೈಕಮಾಂಡಿನ ವರ್ತನೆ ನೋಡಿದರೆ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಯಲ್ಲಿ ಈಗಾಗಲೇ ತೊಡಗಿರುವಂತೆ ಕಾಣುತ್ತಿದೆ. ಈ ಹಿಂದೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳ ಆಪ್ತರಾಗಿದ್ದ ಗಣಿದೊರೆಗಳ ಮೂಲಕ ಬಿ.ಜೆ.ಪಿ.ಪಕ್ಷದೊಳಗೆ ಬಂಡಾಯವೆಬ್ಬಿಸಿ ಆ ಮೂಲಕ ಬಂಡಾಯವೆದ್ದ ಗುಂಪು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಬಗ್ಗೆ ಯೋಜನೆ ರೂಪುಗೊಂಡಿತ್ತು ಎಂಬುವುದು ರಾಜಕೀಯ ವಲಯದಲ್ಲಿ ಕೇಳಿಬರುವ ಮಾಹಿತಿ. ಆದರೆ ವಿಧಿಯಾಟಕ್ಕೆ ಸಿಕ್ಕಿ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಅಕಾಲಿಕ ಮರಣಕ್ಕೀಡಾಗದೇ ಹೋಗುತ್ತಿದ್ದರೆ ಈವತ್ತಿಗಾಗಲೇ ಈ ಪ್ರಯತ್ನ ಯಶಸ್ವಿಯಾಗಿರುತಿತ್ತು. ಆದರೆ ಅವರ ಅಕಾಲಿಕ ಮರಣ ಈ ಎಲ್ಲಾ ಯೋಜನೆಗಳನ್ನು ತಲೆಕೆಳಗಾಗಿಸಿತು ಎಂಬುವುದು ಈಗೇನೂ ಗುಟ್ಟಾಗಿ ಉಳಿದ ವಿಷಯವಲ್ಲ.


ಆನಂತರ ಕೆಲದಿನಗಳ ಮಟ್ಟಿಗೆ ಈ ವಿಷಯವನ್ನು ಮುಂದೂಡಲಾಗಿತ್ತು. ಆದರೆ ಈಗ ಮತ್ತೆ ಅದಕ್ಕೆ ಜೀವ ಬರತೊಡಗಿದೆ. ಈಗ ಪ್ರಮುಖ ಪಾತ್ರ ಗಣಿದೊರೆಗಳ ಬದಲು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನಾಯಕರು ವಹಿಸುತಿದ್ದಾರೆ. ಬಿ.ಜೆ.ಪಿ.ಯಲ್ಲಿನ ಕೆಲವು ಮತ್ತು ಆ ಪಕ್ಷಕ್ಕೆ ಬೆಂಬಲ ನೀಡಿರುವ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಮೂಲಕ ಸರ್ಕಾರ ರಚನೆಗೆ ಸೂಕ್ತ ಸಮಯದಲ್ಲಿ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿಯೇ ದೇವೇಗೌಡರು ಮತ್ತು ದೇಶಪಾಂಡೆಯವರ ಬಾಯಿಯಿಂದ ಈ ರೀತಿಯ ಮಾತುಗಳು ಕೇಳಿಬರುತ್ತಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


ಗಣಿದೊರೆಗಳ ಅಡ್ಡೆಗಳ ಮೇಲೆ ಮೊನ್ನೆ ಸಿ.ಬಿ.ಐ ನಡೆಸಿದ ದಾಳಿಯ ಹಿಂದೆಯೂ ಇದರ ಕೈವಾಡವಿದೆ. ಯುಡಿಯೂರಪ್ಪನವರೊಂದಿಗೆ ಮುನಿಸಿಕೊಂಡು ಕೊನೆಗೆ ಸುಷ್ಮಾ ಸ್ವರಾಜರ ಒತ್ತಾಯಕ್ಕೆ ಮಣಿದ ಗಣಿದೊರೆಗಳ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ತೆಗೆದು ಕೊಂಡ ನಿಲುವುಗಳು ಇದನ್ನು ನೇರವಾಗಿ ಸೂಚಿಸುತ್ತದೆ. ಈಗಾಗಲೇ ಕೇಂದ್ರ ತನಿಖಾ ತಂಡದಿಂದ ಕಂಗಾಲಾಗಿರುವ ರೆಡ್ಡಿಗಳು ಈ ಮೂಲಕವಾದರೂ ಮುಂದಿನ ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ತಮ್ಮ ಕಡೆ ಬರಲಿ ಎಂಬ ಗುಪ್ತ ಅಜೆಂಡಾ ಇದ್ದರೂ ಇರಬಹುದು. ಇಲ್ಲದಿದ್ದಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಎಚ್ಚರಿಕೆಯೂ ಇರಬಹುದು.


ಒಟ್ಟಿನಲ್ಲಿ ಕರ್ನಾಟಕದ ರಾಜಕೀಯದಲ್ಲಿ ಬಿಸಿ ಏರುತ್ತಿದೆ. ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಗೊತ್ತಾಗಲಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ, ಹೆಚ್.ಡಿ. ರೇವಣ್ಣ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು. ಗಣಿಧಣಿಗಳು ಸಾತ್ ಕೊಟ್ಟರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಜೊತೆ ಬಳ್ಳಾರಿ ಲೋಕಸಭಾ ಸದಸ್ಯೆ ಶಾಂತಾ ಕೇಂದ್ರ ಮಂತ್ರಿಯೂ ಆಗಬಹುದು. ಇಲ್ಲದಿದ್ದರೆ ಹೆಚ್.ಡಿ. ಕುಮಾರಸ್ವಾಮಿಯವರಂತೂ ಕೇಂದ್ರದಲ್ಲಿ ಮಂತ್ರಿಯಾಗುವ ಸಾಧ್ಯತೆ ಹೆಚ್ಚು. ಹಾಗೇನಾದರೂ ಆಗಿ ಕುಮಾರಸ್ವಾಮಿಯವರಿಗೆ ಗಣಿ ಖಾತೆ ಸಿಕ್ಕರೆ ರೆಡ್ಡಿಗಳ ಬೆವರಿಳಿಯುವುದಂತೂ ಸತ್ಯ...


- ಅಶ್ರಫ್ ಮಂಜ್ರಾಬಾದ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ