ಶನಿವಾರ, ಅಕ್ಟೋಬರ್ 24, 2009

ಮಮತೆಯ ಮಡಿಲು

ತಾಯ್ನಾಡಿನಿಂದ ಮಿತ್ರನೊಬ್ಬ ಕಳುಹಿಸಿದ್ದ ಎಸ್.ಎಂ.ಎಸ್. ಕೆಲ ಕ್ಷಣ ಮನಸ್ಸನ್ನು ತಾಯಿಯ ಮಡಿಲಲ್ಲಿ ಕಳೆದ ಬಾಲ್ಯದ ನೆನಪುಗಳೆಡೆಗೆ ಕೊಂಡೊಯ್ದಿತ್ತು. ಆ ಎಸ್.ಎಂ.ಎಸ್.ತಾಯಿಯ ಮಮತೆಯ ಕುರಿತಾಗಿದ್ದು ಅದರಲ್ಲಿ ತಾಯಿಯ ಮಮತೆಯ ಕುರಿತು ಹೀಗೆ ಬರೆದಿತ್ತು.

ಒಮ್ಮೆ ಮಳೆಗಾಲದ ಸಮಯದಲ್ಲಿ ಪುಟ್ಟ ಮಗಳು ಮಳೆಯಲ್ಲಿ ನೆನೆದು ಕೊಂಡು ಮನೆಗೆ ಬರುತ್ತಾಳೆ. ಇದನ್ನು ನೋಡಿದ ಆಕೆಯ ಅಣ್ಣ ಆಕೆಗೆ ಏಕೆ ನೀನು ಛತ್ರಿ ತೆಗೆದುಕೊಂಡು ಹೋಗಿಲ್ಲ. ನೋಡು ಆದ ಕಾರಣ ನೀನು ಮಳೆಯಲ್ಲಿ ನೆನೆದು ಕೊಂಡು ಬರಬೇಕಾಯಿತು ಎಂದು ಗದರಿಸುತ್ತಾನೆ. ಅಲ್ಲೇ ಪಕ್ಕದಲ್ಲಿದ್ದ ಆಕೆಯ ಅಕ್ಕ ಸಹ ಅವನ ಮಾತಿಗೆ ದನಿಗೂಡಿಸಿ ಮಳೆ ನಿಲ್ಲುವ ವರೆಗೆ ರಸ್ತೆಯ ಬದಿಯ ಯಾವುದಾದರೊಂದು ಸ್ಥಳದಲ್ಲಿ ನಿಂತು ಮಳೆ ನಿಂತ ನಂತರ ಬರಬೇಕಾಗಿತ್ತು ಎಂದು ಇವಳ ವಿರುದ್ಧ ಹರಿಹಾಯ್ದರೆ ಇವಳ ತಂದೆಯೂ ಸಹ ಮಳೆಯಲ್ಲಿ ನೆನೆದು ಒಮ್ಮೆ ನಿನಗೆ ಶೀತ ಆಗಿ ಜ್ವರ ಬಂದು ಮಲಗಿದರೆ ನಿನಗೆ ಗೊತ್ತಾಗುತ್ತದೆ ಎಂದು ಇವಳನ್ನು ಹಿಯಾಲಿಸುತ್ತಾನೆ. ಆದರೆ ಅದೇ ಸಂಧರ್ಭದಲ್ಲಿ ಅಲ್ಲಿದ್ದ ಆಕೆಯ ತಾಯಿ ತನ್ನ ತನ್ನ ಸೆರಗಿನಿಂದ ಮಗಳ ತಲೆಯನ್ನು ಒರೆಸುತ್ತಾ ಮಗಳ ವಿರುದ್ಧ ಹರಿಹಾಯದೆ ಮಗಳು ನೆನೆಯಲು ಕಾರಣವಾದ ಮಳೆಯ ವಿರುದ್ಧವೇ ಹರಿಹಾಯುತ್ತಾಳೆ. ಇದುವೇ ತಾಯಿಯ ಪ್ರೀತಿ. ಇದುವೇ ತಾಯಿಯ ಮಮತೆ.

ನಿಜ.. ತಾಯಿಯ ಪ್ರೀತಿಯೇ ಅಂತಹದ್ದು. ತಾಯಿಯ ಪ್ರೀತಿಯ ಮುಂದೆ ಇನ್ನಾರ ಪ್ರೀತಿಯೂ ಸರಿಸಾಟಿಯಾಗಿ ನಿಲ್ಲಲಾರದು. ತನ್ನ ಪುಟ್ಟ ಕಂದಮ್ಮನನ್ನು ತನ್ನ ಒಡಲಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಯವ್ವನದ ಬಹುಪಾಲು ಜೀವನವನ್ನು ತನ್ನ ಮಕ್ಕಳ ಆರೈಕೆಯಲ್ಲಿ ಕಳೆಯುವ ತಾಯಿಯ ತ್ಯಾಗ ಬಹುದೊಡ್ಡದು. ತನಗೆ ತನ್ನ ಮನೆಯಲ್ಲಿ ಸಂಕಷ್ಟ ಇದ್ದರೂ ಅದನ್ನು ಮಕ್ಕಳ ಬಳಿ ತೋರಿಸದೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಆಹಾರ ತಯಾರಿಸಿ ಅದನ್ನು ತನ್ನ ಮಕ್ಕಳಿಗೆ ಕೊಟ್ಟು ಮಿಕ್ಕುಳಿದರೆ ತಾನು ತಿಂದು ಇಲ್ಲದಿದ್ದರೆ ಹಸಿದ ಹೊಟ್ಟೆಯಲ್ಲೇ ಮಲಗುವ ತಾಯಂದಿರೇ ಹೆಚ್ಚು. ತಾಯಿಯ ಜೀವನವೇ ಅಂತಹದ್ದು. ತಾಯಿಯ ಕುರಿತು ಮತ್ತು ಆಕೆಯ ತ್ಯಾಗದ ಕುರಿತು ಸಂಪೂರ್ಣವಾಗಿ ಬರೆಯಲು ಅಸಾಧ್ಯ ಎಂಬ ನಂಬಿಕೆ ನನ್ನದು. ತಾಯಿಯ ಮಹಿಮೆ ಹಾಗೆ ಇದೆ. ಇದನ್ನು ಪದಗಳಿಂದ ಬರೆದು ಅಥವಾ ಮಾತುಗಳಿಂದ ವರ್ಣಿಸಿ ಹೇಳಲು ಅಸಾಧ್ಯ ಎಂದು ನಾನು ಭಾವಿಸಿದ್ದೇನೆ.

ತನ್ನ ಜೀವನದ ಬಹುಪಾಲು ಸಮಯವನ್ನು ಮಕ್ಕಳ ಆರೈಕೆಯಲ್ಲಿ ಕಳೆದ ತಾಯಿ ತನ್ನ ಮಕ್ಕಳು ಬೆಳೆದು ದೊಡ್ಡವರಾಗಿ ಸಮಾಜದಲ್ಲಿ ಹೆಸರು ಮಾಡಬೇಕು. ಒಳ್ಳೆಯವರಾಗಿ ಬಾಳಬೇಕು ಎಂದು ಕನಸು ಕಾಣುವುದು ಸ್ವಾಭಾವಿಕ. ಆದರೆ ಆ ತಾಯಿಯ ಮಕ್ಕಳು ಬೆಳೆದು ದೊಡ್ಡವರಾದ ನಂತರ ಆಕೆಯ ಬೇಕು ಬೇಡಗಳಿಗೆ ಸ್ಪಂದಿಸದೇ ಆಕೆ ಇವರಿಗೆ ಒಂದು ಭಾರ ಎಂಬ ಕಲ್ಪನೆ ಇಂದಿನ ಆಧುನಿಕ ಮನುಷ್ಯರೆನಿಸಿಕೊಂಡ ಕೆಲವರಿಗೆ ಬರುತ್ತಿರುದನ್ನು ನಾವು ಕಾಣಬಹುದಾಗಿದೆ. ಇದರ ಪರಿಣಾಮವೇ ಇಂದು ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ದಾಶ್ರಮಗಳು. ತಮ್ಮನ್ನು ತನ್ನ ಮಡಿಲಲ್ಲಿ ಹೊತ್ತು ಬೆಳೆಸಿದ ತಾಯಿ ಇಂದು ಹೈಟೆಕ್ ಸಿಟಿಗಳಲ್ಲಿ ಫ್ಯಾನ್ಸಿ ಹೆಂಡತಿ ಮಕ್ಕಳೊಂದಿಗೆ ವಾಸಿಸುವ ಆಕೆಯ ಮಗನಿಗೆ ಒಂದು ರೀತಿಯ ಭಾರವಾಗಿ ಕಾಣುತ್ತಾಳೆ. ಆದ ಕಾರಣ ಆಕೆಯ ಆರೈಕೆಯನ್ನು ತಾನು ನೋಡಿ ಕೊಳ್ಳುವ ಬದಲು ಯಾವುದಾರೊಂದು ವೃದ್ದಾಶ್ರಮಕ್ಕೆ ಆಕೆಯನ್ನು ಸೇರಿಸಿ ಆತ ತನ್ನ ಕೈತೊಳೆದು ಕೊಳ್ಳುತ್ತಾನೆ. ಇದು ಇಂದು ಸಮಾಜದಲ್ಲಿ ಉನ್ನತರೆನಿಸಿಕೊಂಡ ಕೆಲವು ವ್ಯಕ್ತಿಗಳು ಮಾಡುತ್ತಿರುವ ಮಾತೃ ಸೇವೆ.. ನಿಜಕ್ಕೂ ನಾಚಿಕೆಯಾಗಬೇಕು ಇವರಿಗೆ.

ಯಾವ ತಾಯಿಯನ್ನು ನಮ್ಮ ಸಮಾಜ ಗೌರವ ಆದರಗಳಿಂದ ಕಾಣುತಿತ್ತೋ ಅದೇ ತಾಯಿಯನ್ನು ಇಂದಿನ ಬಹುಪಾಲು ಮಕ್ಕಳು ಬೆಳೆದು ದೊಡ್ಡವರಾದ ನಂತರ ತಿರಸ್ಕರಿಸುವ ಪರಿಸ್ಥಿತಿ ಬಂದಿರುವುದು ಸಮಾಜದ ಅಧಪತನಕ್ಕೆ ಸಾಕ್ಷಿ ಎಂದೇ ಹೇಳಬಹುದು. ವೃದ್ದಾಶ್ರಮದಲ್ಲಿರುವ ತಾಯಿಯನ್ನು ಹಬ್ಬ ಹರಿದಿನಗಳಂದು ಹೆಂಡತಿ ಮಕ್ಕಳ ಜೊತೆ ಹೋಗಿ ಕಂಡು ಬಂದು ತಾವು ಏನೋ ಮಹಾನ್ ಮಾತೃ ಸೇವೆ ಮಾಡಿದ್ದೇವೆ ಎಂದು ಭಾವಿಸುವವರೂ ನಮ್ಮಲ್ಲಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳ ಹುಟ್ಟಿದ ಹಬ್ಬ ಮತ್ತು ಇನ್ನಿತರ ಆಚರಣೆಗಳ ನೆಪದಲ್ಲಿ ತಾಯಿ ಇರುವ ವೃದ್ದಾಶ್ರಮದಲ್ಲಿ ಅನ್ನದಾನ ಏರ್ಪಡಿಸಿ ತಾಯಿಯ ಮೇಲಿನ ಕಪಟ ಪ್ರೀತಿ ತೋರ್ಪಡಿಸುವವರೂ ಇದ್ದಾರೆ. ಯಾವ ತಾಯಿ ಇವರಿಗೆ ನಡೆಯಲು ಆಶಕ್ತರಾದಾಗ ಹೊತ್ತು ಕೊಂಡು ಇವರ ಆರೈಕೆ ಮಾಡಿದಲೋ ಅದೇ ತಾಯಿ ಆಕೆ ನಡೆಯಲು ಆಶಕ್ತರಾದಾಗ ಆಕೆಯ ಸೇವೆ ಮಾಡದೆ ಆಕೆಯನ್ನು ವೃದ್ದಾಶ್ರಮಕ್ಕೆ ಸೇರಿಸುವ ಇಂದಿನ ಅಧುನಿಕ ಜನರ ಆಧುನಿಕ ಕಲ್ಪನೆ ತಾಯ್ತನಕ್ಕೆ ಮಾಡುತ್ತಿರುವ ಅಪಮಾನ ಎಂದೇ ಹೇಳಬಹುದು.

ತಾಯಿಯ ಕುರಿತು ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲೂ ಆಕೆಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ವೈದಿಕ ಧರ್ಮದಲ್ಲಿ ಮಾತೃ ದೇವೋಭವ ಎಂದರೆ ಇಸ್ಲಾಂ ಧರ್ಮ ನಿನ್ನ ತಾಯಿಯ ಪಾದದಡಿ ನಿನಗೆ ಸ್ವರ್ಗವಿದೆ ಎಂದು ಹೇಳುತ್ತದೆ. ಇನ್ನಿತರ ಧರ್ಮಗಳಲ್ಲೂ ತಾಯಿಯ ಕುರಿತಾದ ಈ ರೀತಿಯ ವ್ಯಾಖ್ಯೆಗಳಿವೆ. ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿ ನಮ್ಮ ನಡುವೆ ಇಂದಿಗೂ ಜನಪ್ರಿಯ. ನಿಜಕ್ಕೂ ತಾಯಿಯನ್ನು ಪ್ರೀತಿಸದ ಜನ ಆಕೆಯ ವೃದ್ದಾಪ್ಯದಲ್ಲಿ ಆಕೆಯನ್ನು ಆರೈಕೆ ಮಾಡದ ಜನ ಮನುಷ್ಯರಾಗಿದ್ದರೂ ಮನುಷ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ.

ಅಳಬೇಕೋ ಅಥವಾ ನಗಬೇಕೋ

ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಆಪ್ತ ಮಿತ್ರನೊಬ್ಬನ ತಂದೆ ಆರೋಗ್ಯ ಹದಗೆಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೊದಲೇ ಸ್ವಲ್ಪ ವಯಸ್ಸಾದ ವ್ಯಕ್ತಿ. ಸ್ವಲ್ಪ ಮಟ್ಟಿನ ಎದೆನೋವು ಕಾಣಿಸಿಕೊಂಡ ಕಾರಣ ಸ್ಥಳೀಯ ವೈದ್ಯರಲ್ಲಿ ತೋರಿಸಲಾಗಿ ಅವರು ದೊಡ್ಡ ಡಾಕ್ಟರಿಗೆ ತೋರಿಸಲು ಶಿಫಾರಸು ಮಾಡಿದ ಕಾರಣ ಮಂಗಳೂರಿನ ಖ್ಯಾತ ಆಸ್ಪತ್ರೆಯ ಖ್ಯಾತ ವೈದ್ಯರಿಗೆ ತೋರಿಸಲಾಗಿತ್ತು. ಅವರು ಕೆಲವು ದಿನಗಳ ಮಟ್ಟಿಗೆ ಒಳರೋಗಿಯಾಗಿ ದಾಖಲಾಗಲು ಶಿಫಾರಸು ಮಾಡಿದರು. ಅದರಂತೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.


ಯಾರಾದರೂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಅಂತ ಗೊತ್ತಾದ ಕೂಡಲೇ ಸಹೃದಯಿ ನೆಂಟರಿಷ್ಟರು, ಆಪ್ತ ಮಿತ್ರರು ರೋಗಿಯ ಸಂದರ್ಶನಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡುವುದು ವಾಡಿಕೆ. ಅದೇ ರೀತಿ ಇಲ್ಲಿಯೂ ನಡೆಯುತ್ತಿತ್ತು. ಬಹುಪಾಲು ನೆಂಟರಿಷ್ಟರು ಆಗಲೇ ಭೇಟಿ ಕೊಟ್ಟು ಹೋಗಿದ್ದರು. ರೋಗಿಗೆ ಮತ್ತು ಅವರ ಸೇವೆ ಮಾಡಲು ಆಸ್ಪತ್ರೆಯಲ್ಲಿ ಉಳಿದಿದ್ದ ಅವರ ಪತ್ನಿಗೆ ಬೇಕಾದ ಊಟ, ತಿಂಡಿಗಳನ್ನು ಮಂಗಳೂರಿನಿಂದ ಕೆಲವು ಕಿ.ಮೀ. ದೂರದಲ್ಲಿದ್ದ ಅವರ ನೆಂಟರ ಮನೆಯಿಂದ ತರಲಾಗುತ್ತಿತ್ತು. ಅದಕ್ಕಾಗಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಂಧುವೊಬ್ಬನಿಗೆ ಈ ಜವಾಬ್ಧಾರಿ ವಹಿಸಲಾಗಿತ್ತು. ಆತ ಯಥಾಪ್ರಕಾರ ಪ್ರತಿದಿನ ತಿಂಡಿ, ಊಟ ತೆಗೆದು ಕೊಂಡು ಹೋಗಿ ಕೊಟ್ಟು ಬಂದು ಅವರ ಯೋಗಕ್ಷೇಮದ ಬಗ್ಗೆ ಮನೆಯವರಿಗೆ ಮಾಹಿತಿ ನೀಡುತಿದ್ದ.


ಹೀಗಿರುವಾಗ ಒಂದು ದಿನ ಬೆಳಗಿನ ತಿಂಡಿ ಕೊಡಲು ಹೋದವನು ಮನೆಗೆ ಬಂದು ಹೇಳಿದ.. ಮಾವನನ್ನು ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಮಾವ ಹೇಳಿ ಕಳುಹಿಸಿದ್ದಾರೆ ಎಂದು. ಈ ಮಾತು ಕೇಳಿ ನಿನ್ನೆ ತಾನೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಅವರ ಪತ್ನಿ, ಜೊತೆಗೆ ಅವರ ನೆಂಟರಿಷ್ಟರಿಗೆಲ್ಲಾ ಒಂದು ರೀತಿಯ ಶಾಕ್. ಇವರಿಗೆ ಏನಾಯಿತು? ಆರೋಗ್ಯದಲ್ಲಿ ಏನಾದರೂ ಏರುಪೆರಾಗಿರಬಹುದೇ ಎಂಬ ಸಂಶಯವೂ ಆಗಿತ್ತು. ಇಲ್ಲದಿದ್ದರೆ ಈ ಮಾತು ಏಕೆ ಹೇಳಿ ಕಳುಹಿಸಿಯಾರು? ಈ ರೀತಿಯ ಮಾತುಗಳನ್ನು ಅನಾರೋಗ್ಯದಲ್ಲಿ ನರಳುತ್ತಿರುವವರಂತೂ ಹೇಳಿದರೆ ಅದು ಅಶುಭ ಘಟನೆಯ ಸಂಕೇತ ಎಂಬ ಭಾವನೆ ಬರುವುದೂ ಸ್ವಾಭಾವಿಕ. ಆಗ ವಿಚಾರಿಸಲು ಈಗಿನಂತೆ ಮೊಬೈಲ್ ಫೋನ್ ಸಹ ಇಲ್ಲ. ಆಗಲೇ ಅವರ ಮನೆಯಲ್ಲಿ ಅವರ ಪತ್ನಿಯ ಅಳು ತಾರಕಕ್ಕೆ ಏರಿತ್ತು. ಪೇಟೆಯಿಂದ ಕಾರೊಂದನ್ನು ಬಾಡಿಗೆಗೆ ತಂದು ಆಗಲೇ ಎಲ್ಲರೂ ಆಸ್ಪತ್ರೆಗೆ ಹೊರಟರು.

ಆಸ್ಪತ್ರೆಯಲ್ಲಿ ರೋಗಿ ಆರಾಮವಾಗಿಯೇ ಇದ್ದರು. ಅವರ ಮುಖದಲ್ಲಿ ಅಂತಹ ದುಗುಡವೇನೂ ಇರಲಿಲ್ಲ. ಮನೆಯವರ ಗಾಬರಿ ಕಂಡು ಅವರೇ ನೀವೆಲ್ಲಾ ಏಕಿಷ್ಟು ಗಾಬರಿಯಾಗಿದ್ದೀರಿ ಎಂದು ಪ್ರಶ್ನಿಸಲಾಗಿ ಅವರು ನೀವು ಊಟ ತರುವ ಹುಡುಗನ ಕೈಯಲ್ಲಿ ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಹೇಳಿ ಕಳುಹಿಸಿದ ವಿಷಯ ತಿಳಿದು ಗಾಬರಿಯಾಗಿ ಓಡಿ ಬಂದೆವು ಎಂದು ಹೇಳಿದರು. ಇದನ್ನು ಕೇಳಿ ನಕ್ಕ ರೋಗಿ ನಾನು ಹೇಳಿದ್ದು ಆ ಉದ್ದೇಶದಿಂದಲ್ಲ. ಬೆಳಗ್ಗೆಯೇ ಡಾಕ್ಟರ್ ಬಂದಿದ್ದರು. ಪರೀಕ್ಷಿಸಿ ಇಂದು ಸಂಜೆ ಡಿಸ್ಚಾರ್ಜ್ ಆಗಲು ಹೇಳಿದ್ದಾರೆ. ಹೀಗಿರುವಾಗ ನೋಡಲು ಬಾಕಿ ಇರುವವರು ಅದರ ಮುಂಚೆ ಬಂದು ನೋಡಿದರೆ ಒಳ್ಳೆಯದಲ್ಲವ ಎಂಬ ಉದ್ದೇಶದಿಂದ ಹೇಳಿದೆ ಎಂದು ಹೇಳಿದಾಗ ಅಲ್ಲಿದ್ದವರಿಗೊಮ್ಮೆ ಪಿತ್ತ ನೆತ್ತಿಗೇರಿ ಇಳಿದಿತ್ತು. ಇವರ ಒಂದು ಮಾತಿನಿಂದ ಒಮ್ಮೆ ಅಲ್ಲೋಲಕಲ್ಲೋಲವಾಗಿದ್ದ ಇವರ ಮನೆ ಮಂದಿ ಈಗಿನ ಇವರ ಮಾತು ಕೇಳಿ ಅಳಬೇಕೋ ಅಥವಾ ನಗಬೇಕೋ ಎಂದು ತಿಳಿಯದಾದರು. ಕೊನೆಗೆ ಸಂಜೆ ವರೆಗೆ ನಿಂತು ಬಂದ ಅದೇ ಕಾರಿನಲ್ಲಿ ಇವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದು ಕೊಂಡು ಹೋದರು.

ಅಮಾಯಕನ ಕೊಲೆ...


ಯಾವಾಗಲಾದರೊಮ್ಮೆ ಮಂಗಳೂರಿನ ಬಂದರು ರಸ್ತೆಗೆ ಭೇಟಿ ಕೊಟ್ಟರೆ ಆ ಮುಖವನ್ನೊಮ್ಮೆ ನೋಡಲು ಸಿಗುತ್ತಿತ್ತು. ಸ್ವಲ್ಪ ವಯಸ್ಸಾಗಿರುವ ಶಾಂತ ಸ್ವಭಾವದ ವ್ಯಕ್ತಿ ಅವರು. ಧಾರ್ಮಿಕವಾಗಿಯೂ ನಂಬಿಕೆಯುಳ್ಳವರು. ದೈವ ಭಕ್ತರೂ ಕೂಡ. ಬಂದರು ರಸ್ತೆಯಲ್ಲಿ ನನ್ನ ಚಿಕ್ಕಪ್ಪನ ಮಗನ ಅಂಗಡಿ ಇತ್ತು . ಅದರ ಮುಂದೆ ಮಂಗಳೂರಿನ ಪ್ರತಿಷ್ಠಿತ ಬದ್ರಿಯಾ ಕಾಲೇಜು ಇರುವುದು. ಅಲ್ಲಿ ಯಾವಾಗಲಾದರೊಮ್ಮೆ ಇವರನ್ನು ಕಾಣಸಿಗುತ್ತಿತ್ತು. ಸರಳ, ಶಾಂತ ಸ್ವಾಭಾವದ ವ್ಯಕ್ತಿಯಾದ ಇವರ ವೈಯುಕ್ತಿಕ ಪರಿಚಯ ಇಲ್ಲದಿದ್ದರೂ ಮುಖ ಪರಿಚಯವಿತ್ತು. ಆದರೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ ಮೊನ್ನೆ ಅಂತರ್ಜಾಲದಲ್ಲಿ ವಾರ್ತೆಗಳನ್ನು ಓದುತಿದ್ದಾಗಲೇ ಆ ವ್ಯಕ್ತಿಯ ಹೆಸರು ಗೊತ್ತಾದದ್ದು.



ಹೆಸರು ಹಸನ್ ಸಾಹೇಬ್. ಸರಿ ಸುಮಾರು ಅರವತ್ತು ವರ್ಷದ ವಯಸ್ಸಿನವರು.ಬದ್ರಿಯಾ ಕಾಲೇಜಿನ ಕಾವಲುಗಾರ. ಅವರನ್ನು ಯಾರೋ ದುಷ್ಕರ್ಮಿಗಳು ಕಬ್ಬಿಣದ ರಾಡ್ ಮತ್ತಿತರ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು. ಮೇಲ್ನೋಟಕ್ಕೆ ಕೊಲೆಯ ಉದ್ದೇಶ ಪಕ್ಕದ ಅಂಗಡಿಯೊಂದನ್ನು ಕಳ್ಳರು ಲೂಟಿ ಮಾಡುವಾಗ ಇವರು ತಡೆಯಲು ಹೋದ ಕಾರಣದಿಂದ ನಡೆದಿರಬಹುದು ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಸತ್ಯ . ಆದರೆ ಇದರ ನಿಜವಾದ ಹಿನ್ನಲೆ ಆರೋಪಿಗಳನ್ನು ಬಂಧಿಸಿದ ನಂತರವಷ್ಟೇ ಗೊತ್ತಾಗಬಹುದು .ಆದರೆ ಅಷ್ಟೇನೂ ದೃಢ ಕಾಯರಲ್ಲದ ಈ ವ್ಯಕ್ತಿಯನ್ನು ಆ ದುಷ್ಟರು ಕೊಲೆ ಮಾಡಬೇಕಿರಲಿಲ್ಲ . ಸ್ವಲ್ಪ ದೂಡಿದರೆ ಆಚೆ ಕಡೆ ಬಿದ್ದು ಬಿಡುತ್ತಿದ್ದರು. ತನ್ನ ಜೀವನದ ಸಂಧ್ಯಾ ಕಾಲದಲ್ಲಿದ್ದ ಈ ವ್ಯಕ್ತಿಯ ಕೊಲೆ ನಿಜಕ್ಕೂ ಮನನೋಯಿಸುವಂತಹದ್ದು. ಆದರೆ ವಿಧಿ ಈ ರೀತಿ ಇತ್ತೇನೋ...? ಇನ್ನು ಮುಂದೆ ಬದ್ರಿಯಾ ಕಾಲೇಜಿನ ಮುಂದೆ ಕಾಣುತಿದ್ದ ಆ ಹಸನ್ಮುಖಿ ಹಸನ್ ಸಾಹೇಬರ ಮುಖ ಮಾತ್ರ ಯಾವಾಗಲೂ ಕಾಣಸಿಗಲಾರದು.

ಶುಭಾಶಯ ವಿನಿಮಯ ಸಾಂಕೇತಿಕವಾಗುತ್ತಿದೆಯೇ.....

ಕಳೆದ ವರ್ಷದ ವ್ಯಾಲಂಟೈನ್ ದಿನದ ವಿವಾದದ ಬಗ್ಗೆ ತಮಗೆ ಗೊತ್ತಿರಬಹುದು. ಒಂದು ಕಡೆ ವಿರೋಧಿಸುವವರಿದ್ದರೆ ಮತ್ತೊಂದೆಡೆ ಪ್ರೀತಿಸಲು ಬೆಂಬಲಿಸುವವರೂ ಸಾಕಷ್ಟಿದ್ದರು.ಈ ಎಲ್ಲಾ ಪ್ರಹಸನಗಳ ನಡುವೆ ಕೊನೆಗೂ ಪ್ರೀತಿ ಗೆದ್ದಿತು ಅಂತ ನಾಡಿನ ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ಬಿಂಬಿಸಿದವು.ಅದು ನಿಜವೇ ಆಗಿದ್ದು ಇದುವರೆಗೆ ಹಿಂಸೆ ಮತ್ತು ಅಹಿಂಸೆಗಳ ನಡುವೆ ಜಗತ್ತಿನಲ್ಲಿ ಕೊನೆಗೆ ಗೆಲುವು ಕಂಡಿದ್ದು ಅಹಿಂಸೆಯೇ.ಪ್ರೇಮಿಗಳಿಗೆ ಬೆಂಬಲ ಸೂಚಿಸಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೇರಿದ್ದ ನಾಡಿನ ಕೆಲ ಪ್ರಗತಿಪರರು,ರೈತ ಮತ್ತು ಕನ್ನಡ ಹೋರಾಟಗಾರರು ವ್ಯಾಲಂಟೈನ್ ದಿನಕ್ಕೆ ವಿಶೇಷ ಅರ್ಥ ನೀಡಿ ಈ ದಿನ ಕೇವಲ ಹುಡುಗ ಹುಡುಗಿಯರು ಪ್ರೀತಿಸುವ ದಿನವಲ್ಲ.ತಂದೆ,ತಾಯಿ.ಅಣ್ಣ,ತಮ್ಮ,ತಂಗಿ, ಗೆಳೆಯರು ಹೀಗೆ ಯಾರು ಬೇಕಾದರೂ ಈ ದಿನವನ್ನು ಆಚರಿಸಬಹುದು ಎಂದು ಹೇಳುವ ಮೂಲಕ ಈ ದಿನಕ್ಕೊಂದು ಹೊಸ ವ್ಯಾಖ್ಯೆಯನ್ನೇ ನೀಡಿಬಿಟ್ಟರು.

ಇದರಿಂದ ಉತ್ತೇಜಿತರಾಗಿಯೋ ಏನೋ ನನ್ನ ಮಿತ್ರರೊಬ್ಬರು ನನಗೊಂದು ವ್ಯಾಲಂಟೈನ್ ದಿನದ ಶುಭಾಶಯ ಕೋರಿ ಪುಟ್ಟ ಎಸ್.ಎಂ.ಎಸ್. ಒಂದನ್ನು ಕಳುಹಿಸಿದರು. ಈಗಂತೂ ಭಾರತದಲ್ಲಿ ದೂರವಾಣಿ ಸಂಸ್ಥೆಗಳು ಎಸ್.ಎಂ.ಎಸ್. ಸೇವೆಯನ್ನು ಉಚಿತವಾಗಿ ನೀಡುತ್ತಿರುವುದರಿಂದ ದಿನಕ್ಕೆ ಮೊಬೈಲಿಗೆ ಬರುವ ಎಸ್.ಎಂ.ಎಸ್.ಗಳಿಗೇನೂ ಬರವಿಲ್ಲ.ಅದೂ ಅಲ್ಲದೆ ಈಗಿನ ಜನರಂತೂ ತಿಂಗಳಿಗೆ ಆಗಾಗ ಬರುವ ವಿಶೇಷ ದಿನಗಳಂದು ಒಂದೊಂದು ಉಚಿತ ಎಸ್.ಎಂ.ಎಸ್.ಕಳುಹಿಸಿ ಶುಭ ಕೋರುವುದು ಒಂದು ಸಂಪ್ರದಾಯವೇ ಆಗಿಬಿಟ್ಟಂತಿದೆ.ಏನೇ ಆಗಲೀ ಶುಭಾಶಯ ಕೋರಿದ ಮಿತ್ರನಿಗೆ ನಾನು ಋಣಿ.
ಆದರೆ ಈ ಶುಭಾಶಯ ವಿನಿಮಯ ಭಾವನಾತ್ಮಕ ಸಂಬ್ಹಂಧಗಲಿಲ್ಲಧ ಕೇವಲ ಒಂದು ಸಾಂಕೇತಿಕವಾದ ಕ್ರಿಯೆಯಾಗಿ ಮಾರ್ಪಾಡಾಗಿದೆಯೇ ಎಂಬ ಸಂಶಯ ಮೂಡುತ್ತದೆ.


ಏಕೆಂದರೆ ನನಗೆ ಗೊತ್ತಿರುವಂತೆ ಕೇವಲ 10 ರಿಂದ 12ವರ್ಷಗಳ ಹಿಂದಿನ ಮಾತು. ಆಗ ನಾವು ಹೊಸ ವರುಷದ ಸ್ವಾಗತಕ್ಕೆ ಡಿಸೆಂಬರ್ ತಿಂಗಳಿನಲ್ಲೇ ಸಜ್ಜಾಗುತಿದ್ದೆವು. ಆಗಲೇ ನಾವು ಶುಭಾಶಯ ಕೋರಬೇಕಾದ ಗೆಳೆಯರ, ಕುಟುಂಬಿಕರ ಪಟ್ಟಿ ಸಿದ್ಧವಾಗಿಬಿಡುತಿತ್ತು.ಡಿಸೆಂಬರ್ ತಿಂಗಳ ಮಧ್ಯದಲ್ಲೇ ನಗರದ ಗ್ರೀಟಿಂಗ್ ಕಾರ್ಡ್ ಅಂಗಡಿಗಳಿಗೆ ಹೋಗಿ ಅಲ್ಲಿ ನಮಗೆ ಬೇಕಾದ ಗ್ರೀಟಿಂಗ್ ಕಾರ್ಡುಗಳನ್ನು ಆಯ್ಕೆ ಮಾಡಿ ಅದನ್ನು ಮನೆಗೆ ತಂದು ಅದರಲ್ಲಿ ಕಳುಹಿಸಬೇಕಾದವರಿಗೆ ಶುಭಾಶಯಗಳನ್ನು ಮತ್ತು ಅವರ ವಿಳಾಸವನ್ನು ಬರೆದು ಅದನ್ನು ಜೋಪಾನವಾಗಿ ಪೋಸ್ಟ್ ಮಾಡುತಿದ್ದೆವು.ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಕನಿಷ್ಠ 10 ರಿಂದ 15 ದಿನಗಳನ್ನು ತೆಗೆದುಕೊಳ್ಳುತಿತ್ತು.ಈ ದಿನಗಳಲ್ಲಿ ನಮ್ಮ ಮನದಲ್ಲಿ ನಾವು ಕಾರ್ಡ್ ಕಳುಹಿಸಬೇಕಾದ ಗೆಳೆಯರು ಮತ್ತು ಕುಟುಂಬಿಕರು ಮನೆ ಮಾಡಿರುತಿದ್ದರು.ಕಾರ್ಡ್ ಕೊಳ್ಳುವಾಗಿನಿಂದ ಹಿಡಿದು ಅದನ್ನು ಪೋಸ್ಟ್ ಮಾಡುವವರೆಗೆ ನಮ್ಮ ಮನಸ್ಸಿನಲ್ಲಿ ಅವರ ನೆನಪುಗಳು ಆಗಾಗ ಬರುತಿತ್ತು.



ಆದರೆ ಈಗ ಕಾಲ ಬದಲಾಗಿದೆ.ಗ್ರೀಟಿಂಗ್ ಕಾರ್ಡುಗಳ ಬಳಕೆ ಕಡಿಮೆ ಆಗಿದೆ.ಈಗಂತೂ ಮೊಬೈಲ್ ಯುಗ. ವಿಶೇಷ ದಿನದಂದು ಬೆಳಗೆದ್ದು ಆಯಾ ದಿನದ ಶುಭಾಶಯ ಕೋರಿ ಒಂದು ಎಸ್.ಎಂ.ಎಸ್. ಮಾಡಿದರಾಯಿತು.ಇಲ್ಲದಿದ್ದರೆ ಇನ್ನಾರೋ ಕಳುಹಿಸಿದ ಎಸ್.ಎಂ.ಎಸ್. ಅನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಿದರಾಯಿತು.ಈ ರೀತಿಯ ಶುಭಾಶಯ ವಿನಿಮಯದಿಂದ ಸಿಗುವ ಆನಂದ ಕ್ಷಣಿಕವಾಗಿದ್ದು ಇದೊಂದು ಯಾಂತ್ರಿಕ ಕ್ರಿಯೆಯಂತೆ ನಡೆದು ಹೋಗುತ್ತದೆ.



ಕಾಲ ಬದಲಾದಂತೆ ಜನಗಳೂ ಬದಲಾಗಿದ್ದಾರೆ. ಇದು ವೇಗದ ಕಾಲ. ಜನಗಳಿಗೆ ಸಮಯವೇ ಇಲ್ಲ...ಎಲ್ಲವೂ ಫಾಸ್ಟ್ ...ಜನಗಳ ನಡುವೆ ಕುಟುಂಬಿಕರ ನಡುವೆ ಈ ಹಿಂದೆ ಇದ್ದ ಭಾಂಧವ್ಯ ಈಗಿಲ್ಲ.ಹಿಂದಿನಂತೆ ಹಬ್ಬ ಹರಿದಿನಗಳಂದು ನೆಂಟರಿಷ್ಟರ, ಗೆಳೆಯರ ಮನೆಗಳಿಗೆ ಭೇಟಿ ಕೊಡುವ ಸಂಪ್ರದಾಯವಂತೂ ಹಳೆಯದಾಗಿಬಿಟ್ಟಿದೆ. ಇತರ ದಿನಗಳಲ್ಲಿ ಹೋಗಲಿ ಹಬ್ಬದಂದೂ ವಿಶೇಷ ಆಹಾರದ ತಯಾರಿಯೂ ಕಡಿಮೆ. ಅದಕ್ಕೂ ಫಾಸ್ಟ್ ಫುಡ್.ಹೇಗೆ ಈಗಿನ ಜನಗಳು ವೇಗದ ಜೀವನದ ಅನುಕೂಲಕ್ಕಾಗಿ ಸತ್ವರಹಿತವಾದ ಜಂಕ್ ಫುಡ್, ಫಾಸ್ಟ್ ಫುಡ್ ಗಳನ್ನು ನೆಚ್ಚಿ ಕೊಂಡಿದ್ದಾರೋ ಅದೇ ರೀತಿ ಈಗಿನ ವೇಗದ ಶುಭಾಶಯಗಳೂ ಹಿಂದಿನ ಗ್ರೀಟಿಂಗ್ ಕಾರ್ಡುಗಳ ಶುಭಾಶಯಗಳಂತೆ ಸತ್ವಭರಿತವಾಗಿರದೆ ಸತ್ವರಹಿತವಾಗಿರುವುದಂತೂ ಸತ್ಯ..

ಮರುಭೂಮಿಯ ಮಲೆನಾಡು ತಬೂಕ್ ...

ಸೌದಿ ಅರೇಬಿಯಾ ಎಂದೊಡನೆ ನೆನಪಾಗುವುದು ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಮಕ್ಕಾ, ಮದೀನ ಜೊತೆಗೆ ಇಲ್ಲಿನ ಮರಳುಗಾಡುಪ್ರದೇಶ, ಸುಡುಬಿಸಿಲಿನ ವಾತಾವರಣ ಹಾಗೂ ಸಾಧಾರಣ ಗಲ್ಫ್ ರಾಷ್ಟ್ರಗಳಲ್ಲಿರುವಂತೆ ಕೆಲ ಗಗನಚುಂಬಿ ಕಟ್ಟಡಗಳು.


ಇದೇ ರೀತಿಯ ಕಲ್ಪನೆಯೊಂದಿಗೆ ಉದ್ಯೋಗದ ನಿಮಿತ್ತ ತವರು ನಾಡಿನಿಂದ ಹೊರಟ ನಾನು ರಿಯಾದ್ ಮಾರ್ಗವಾಗಿ ವಿಮಾನದ ಮೂಲಕ ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ಬಂದಾಗ ವಿಮಾನದ ಕಿಟಕಿಗಳಿಂದ ಒಣಮರುಭೂಮಿಯ ಬದಲು ಹಸಿರಿನ ದೃಶ್ಯಗಳು ಗೋಚರಿಸುತ್ತಿದ್ದವು. ನಾನಂದುಕೊಂಡಂತೆ ತಬೂಕ್ ನಗರ ಒಣಮರುಭೂಮಿಯಾಗಿರದೆ ಫಲವತ್ತಾದ ಫಲಪುಷ್ಪಗಳಿಂದ ಕಂಗೊಳಿಸುವ ಹಸಿರು ಪ್ರದೇಶವಾಗಿತ್ತು.ಇದುವೇ ಈ ನಗರದ ವಿಶೇಷ.ಇಲ್ಲಿನ ಜನ ಈ ಮರುಭೂಮಿಯಲ್ಲಿ ಖರ್ಜೂರದ ಜೊತೆಗೆ ಟೊಮ್ಯಾಟೋ, ಸೌತೆಕಾಯಿ, ಬದನೆ, ಹಸಿರುಮೆಣಸು, ದ್ರಾಕ್ಷಿ, ಸೇಬು ಸೇರಿದಂತೆ ಹಲವು ಬಗೆಯ ತರಕಾರಿಗಳ ಜೊತೆಗೆ ಕೆಲವು ನಮೂನೆಯ ಪುಷ್ಪಗಳನ್ನೂ ಬೆಳೆದು ತಬೂಕ್ ನಗರವನ್ನು ಕೃಷಿ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.ಹೀಗಾಗಿ ಈ ನಗರದ ಬಗ್ಗೆ ಕೆಲವು ಮಾಹಿತಿಯನ್ನು ಜೊತೆಗೆ ಇಲ್ಲಿನ ವೈಶಿಷ್ಟತೆಯನ್ನು ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.


ಈ ನಗರದ ಪ್ರಮುಖ ವಾಣಿಜ್ಯ ವ್ಯವಹಾರ ಕೃಷಿ ಆಧಾರಿತವಾಗಿದ್ದರೂ ಇಲ್ಲಿನ ಬೇಸಾಯ ಮಳೆ ಆಧಾರಿತವಾಗಿಲ್ಲ.ಇಲ್ಲಿ ವರ್ಷದಲ್ಲಿ ಕೇವಲ 5 ರಿಂದ 6 ಬಾರಿ ಮಾತ್ರ ಮಳೆ ಬರುತ್ತದೆ.ಆದ ಕಾರಣ ಇಲ್ಲಿನ ಕೃಷಿಕರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು ಪಂಪುಸೆಟ್ಟುಗಳ ಮೂಲಕ ತಮ್ಮ ಬೆಳೆಗೆ ನೀರುಣಿಸುತ್ತಾರೆ.ಹೀಗಾಗಿ ಇಲ್ಲಿ ಅಲ್ಲಲ್ಲಿ ಹೆಚ್ಚಾಗಿ ನೀರಿನ ಕೊಳವೆ ಬಾವಿಗಳು ಕಾಣಸಿಗುತ್ತವೆ.ಇಲ್ಲಿ ಬೆಳೆದ ತರಕಾರಿಗಳು ಸೌದಿಯ ವಿವಿಧ ಪ್ರದೇಶಗಳಿಗೆ ಜೊತೆಗೆ ಕೆಲ ಪುಷ್ಪಗಳು ವಿದೇಶಗಳಿಗೂ ರವಾನೆಯಾಗುತ್ತದೆ.ಇಲ್ಲಿನ ಜನ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದು ಕುರಿ,ಆಡು,ಒಂಟೆ ಮತ್ತು ಕೋಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುತ್ತಾರೆ.


ಇಲ್ಲಿನ ಕೃಷಿಕರು ಬೆಳೆದ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆಯಿದ್ದು ಇದಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಗಳಿವೆ.ಅಲ್ಲಿ ರೈತರು ತಾವು ಬೆಳೆದ ವಸ್ತುಗಳನ್ನು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.ಅದೂ ಅಲ್ಲದೆ ಪ್ರತೀ ಶುಕ್ರವಾರ ನಮಾಜಿನ ನಂತರ ಮಸೀದಿಯ ಹೊರಭಾಗದಲ್ಲಿ ಕೃಷಿಕರು ತಾವು ಬೆಳೆದ ವಸ್ತುಗಳನ್ನು ವಾಹನಗಳಲ್ಲಿ ತುಂಬಿ ತಂದು ಮಾರಾಟ ಮಾಡುವ ದೃಶ್ಯವೂ ಇಲ್ಲಿ ಸಾಮಾನ್ಯ.
ರಾಜಧಾನಿ ರಿಯಾದಿನಿಂದ ಸುಮಾರು 1400 ಕಿ.ಮೀ.ದೂರ ಇರುವ ತಬೂಕ್ ನಗರ ಸೌದಿ ಅರೇಬಿಯಾದ ಗಡಿಪ್ರದೇಶವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳಿವೆ.ಅದಲ್ಲದೆ ಈ ನಗರ ಈ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದು ಆದ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೇನಾಪಡೆಯ ಸಮವಸ್ತ್ರ ಧರಿಸಿದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಇಲ್ಲಿನ ಸೈನಿಕರಿಗೆ ಮತ್ತು ನಾಗರಿಕರಿಗೆ ಪರ್ಯಾಯ ಆದಾಯಕ್ಕಾಗಿ ಇಲ್ಲಿನ ಸರ್ಕಾರ ಸ್ಥಳೀಯವಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಮಿನಿಗೂಡ್ಸ್ ಟೆಂಪೋಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ.ಆದ ಕಾರಣ ಇಲ್ಲಿ ಟ್ಯಾಕ್ಸಿಗಳು ಕಾಣಸಿಗುವುದಿಲ್ಲ. ಇಲ್ಲಿನ ನಾಗರೀಕರು ಸ್ಥಳೀಯ ಪ್ರಯಾಣಕ್ಕಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಈ ಟೆಂಪೋಗಳನ್ನು ಆಶ್ರಯಿಸಬೇಕಾಗುತ್ತದೆ.


ಇಲ್ಲಿಂದ ಸುಮಾರು 160 ಕಿ.ಮೀ.ದೂರದಲ್ಲಿ ದುಬಾ ಎಂದು ಕರೆಯಲ್ಪಡುವ ಸಮುದ್ರತೀರ ಪ್ರದೇಶವಿದ್ದು ಅದು ಇಲ್ಲಿನ ನೆಚ್ಚಿನ ಪ್ರವಾಸಿ ತಾಣ.ಇಲ್ಲಿನ ಬೀಚ್ ಸುಂದರವಾಗಿದ್ದು ಸಮುದ್ರವೂ ಸಹ ಅಷ್ಟೆ ಶಾಂತವಾಗಿದೆ.ಹಾಗಾಗಿ ಈ ಬೀಚಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿ ರಜಾದಿನದ ಮಜಾ ಸವಿಯುವುದೇ ಒಂದು ಅವಿಸ್ಮರಣೀಯವಾದ ಅನುಭವವಾಗಿದ್ದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ಇಲ್ಲಿನ ಸಮುದ್ರ ತೀರದಿಂದ ಈಜಿಪ್ಟ್ ದೇಶಕ್ಕೆ ನಾಗರಿಕ ಹಡಗು ಸಾರಿಗೆ ವ್ಯವಸ್ಥೆಯಿದ್ದು ಸಾವಿರಾರು ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಜೊತೆ ಈಜಿಪ್ಟಿಗೆ ಪ್ರಯಾಣಿಸಲು ಸಿದ್ಧರಾಗಿ ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ.


ಪೂರ್ತಿ ಸೌದಿ ಅರೇಬಿಯಾ ಕಡು ಬಿಸಿಲಿಂದ ಧಗಧಗಿಸುತ್ತಿರುವಾಗಲೂ ತಬೂಕಿನ ಹವಾಮಾನ ಇದಕ್ಕೆ ವ್ಯತಿರಿಕ್ತವಾಗಿ ತಂಪಾಗಿರುತ್ತದೆ.ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ನೈಸರ್ಗಿಕವಾದ ತಂಪು ಹವೆಯನ್ನು ಸವಿಯಲು ಇಲ್ಲಿಗೆ ಬರುವವರೂ ಬಹಳಷ್ಟಿದ್ದಾರೆ.ಈ ರೀತಿಯ ಕಾರಣಗಳಿಂದಾಗಿ ಇದು ಸೌದಿ ನಾಗರೀಕರ ನೆಚ್ಚಿನ ತಾಣವಾಗಿದ್ದು ತಾವು ಕೂಡ ಸೌದಿ ಅರೇಬಿಯಾಕ್ಕೆ ಬಂದರೆ ತಬೂಕ್ ಸಂದರ್ಶಿಸಲು ಮರೆಯದಿರಿ.

ಬಾಡದಿರು ಸ್ನೇಹದ ಹೂವೇ.....

ಪ್ರೀತಿ,ಪ್ರೇಮ,ಸ್ನೇಹ,ಕರುಣೆ ಇವು ಮಾನವನ ಪ್ರತ್ಯೇಕವಾದ ಗುಣಗಳು. ಇವುಗಳ ಸಮ್ಮಿಲನವನ್ನೇ ಮಾನವೀಯತೆ ಎಂದು ಕರೆದರೆ ತಪ್ಪಾಗಲಾರದು ಎಂಬುವುದು ನನ್ನ ಅಭಿಪ್ರಾಯ. ಪ್ರೀತಿ,ಪ್ರೇಮ,ವಿಶ್ವಾಸದಿಂದಲೇ ಒಂದು ಸುಭದ್ರ ಸಮಾಜವನ್ನು ಕಟ್ಟಲು ಸಾಧ್ಯವಿದ್ದು ಒಂದು ನಾಡಿನ ಅಭಿವೃದ್ಧಿಯಲ್ಲಿ ಇವು ಮಹತ್ತರ ಪಾತ್ರವನ್ನು ವಹಿಸುತ್ತದೆ ಮತ್ತು ವಹಿಸಿದ ಉದಾಹರಣೆಗಳೂ ಸಾಕಷ್ಟಿವೆ.ಆದರೆ ಏಕೋ ಏನೋ ಈ 2009 ನೇ ವರ್ಷದಲ್ಲಿ ಎಲ್ಲೋ ಒಂದು ಕಡೆ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಕೆಟ್ಟ ದಿನಗಳು ಬರುತ್ತಿದೆಯೇ ಎಂಬ ಭಾವನೆಯನ್ನು ಇತ್ತೀಚೆಗೆ ಕನ್ನಡ ನಾಡಿನಾದ್ಯಂತ ನಡೆಯುತ್ತಿರುವ ಘಟನೆಗಳು ಮನಸ್ಸಿನಲ್ಲಿ ಮೂಡಿಸುತ್ತಿರುವುದಂತೂ ಸತ್ಯ.ಪ್ರೀತಿ ಪ್ರೇಮ ಸೌಹಾರ್ದಕ್ಕೆ ಹೆಸರಾಗಿದ್ದ, ಕುವೆಂಪುರಂತಹ ಮಾನವತಾವಾದಿಗಳು, ಬಸವಣ್ಣನವರಂತಹ ವಚನಕಾರರು, ಸಂತ ಶಿಶುನಾಳಶರೀಫರಂಥ ಸೌಹಾರ್ದಪ್ರಿಯರು ಜನ್ಮತಳೆದ ಈ ನಾಡಿನಲ್ಲಿ ಇಂದು ಮಾನವೀಯತೆಯ ವಿರೋಧಿ ಶಕ್ತಿಗಳು ವಿಜ್ರಂಭಿಸುತ್ತಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ನಾವು ಮಾನವೀಯತೆಯನ್ನು ಮರೆಯುತ್ತಿದ್ದೇವೆಯೇ ಎಂಬ ಸಂಶಯವನ್ನು ಮೂಡಿಸುತ್ತದೆ.



ನಿಜ.. ಇತ್ತೀಚಿಗೆ ಕನ್ನಡ ನಾಡಿನಲ್ಲಿ ನಡೆದ ಘಟನೆಗಳು ಮಾನವನ ಸ್ವಭಾವಕ್ಕೆ ತಕ್ಕುದಾದುದಲ್ಲ. ಮಹಿಳೆಯರ ಮೇಲೆ ನಡೆದ ದಾಳಿ, ಧರ್ಮದ ಹೆಸರಿನಲ್ಲಿ ಧಾರ್ಮಿಕ ಮತಾಂಧರು ನಡೆಸುತ್ತಿರುವ ಧರ್ಮ ವಿರೋಧಿ ಪುಂಡಾಟಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಕಳಂಕಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯನ ನಡುವೆ ಶಾಂತಿ ಹಾಗೂ ಸೌಹಾರ್ದತೆಯನ್ನು ಮೂಡಿಸಬೇಕಾದ ಧರ್ಮಗಳು ಇದು ಮಾನವರ ನಡುವೆ ಕಂದಕ ಮೂಡಿಸುತ್ತಿದೆ. ಪರಸ್ಪರ ಒಟ್ಟಿಗೆ ಜೀವಿಸುತಿದ್ದ ಜನ ಧರ್ಮದ ಹೆಸರಿನಲ್ಲಿ ವಿಭಜನೆಗೊಳ್ಳುತ್ತಿರುವುದು ಧಾರ್ಮಿಕ ಅಧಃಪತನದ ಸಂಕೇತ ಎಂದರೂ ತಪ್ಪಾಗಲಾರದು.



ಧರ್ಮಗಳು ಮಾನವನ ಕಲ್ಯಾಣಕ್ಕಾಗಿ ಸ್ಥಾಪಿತವಾಗಿವೆ. ಯಾವುದೇ ಧರ್ಮ ದ್ವೇಷವನ್ನು ಬಿತ್ತುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಗೆಲ್ಲು ಎಂದೇ ಜಗತ್ತಿನ ಎಲ್ಲಾ ಧರ್ಮಗಳು ಅದರ ಅನುಯಾಯಿಗಳಿಗೆ ಕರೆ ಕೊಡುತ್ತದೆ. ಆದರೆ ಧರ್ಮಗಳಲ್ಲಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಮತಾಂಧ ಶಕ್ತಿಗಳು ಧರ್ಮದ ವ್ಯಾಖ್ಯಾನವನ್ನೇ ತಿರುಚಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದನ್ನು ಕಾಣಬಹುದು. ಮನುಷ್ಯ ಮನುಷ್ಯನ ನಡುವೆ ಭಾಂದವ್ಯ ಮೂಡಿಸಬೆಕಿದ್ದ ಬೇಕಿದ್ದ ಧಾರ್ಮಿಕ ಆಚರಣೆಗಳು ಇಂದು ಒಡಕನ್ನು ಮೂಡಿಸುತ್ತಿದೆ. ದೀಪಾವಳಿಯ ದಿನದಲ್ಲಿ ಹಿಂದೂಗಳ ಜೊತೆ ಸೇರಿ ಹಬ್ಬ ಆಚರಿಸುತ್ತಾ ಪಟಾಕಿ ಹೊಡೆಯುತಿದ್ದ ಮುಸ್ಲಿಮರು, ಈದ್ ಹಬ್ಬಗಳಂದು ಮುಸ್ಲಿಮರ ಮನೆಗಳಲ್ಲಿ ಬಂದು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತಿದ್ದ ಹಿಂದೂಗಳು, ಕ್ರೈಸ್ತರ ಸಾಂತ್ ಮೇರಿ ಹಬ್ಬದ ದಿನ ಇಗರ್ಜಿಗಳಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಲ್ಲುತಿದ್ದ ಎಲ್ಲಾ ಧರ್ಮದ ಜನರು ಈ ರೀತಿಯ ದೃಶ್ಯಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ. ಮನುಷ್ಯ ನಿಧಾನವಾಗಿ ಧರ್ಮದ ಅಮಲಿನಲ್ಲಿ ಮಾನವೀಯತೆಯನ್ನು ಮರೆಯುತ್ತಿರುವುದು ಈ ನಾಡಿನ ದುರಂತ ಎಂದೇ ಹೇಳಬಹುದು.



ಆದರೂ ಒಡೆದು ಹೋಗುತ್ತಿರುವ ಸಮಾಜವನ್ನು ರಕ್ಷಿಸಲು ಬೇಕಾದಷ್ಟು ಜನರು ಅಂದರೆ ಸೌಹಾರ್ದ ಪ್ರಿಯರು ಇಂದಿಗೂ ನಮ್ಮ ನಡುವೆ ಇದ್ದಾರೆ. ಜೊತೆಗೆ ಕನ್ನಡ ಖ್ಯಾತ ಕವಿಗಳೂ, ದಾರ್ಶನಿಕರೂ, ವಚನಕಾರರೂ ಬರೆದ ಸೌಹಾರ್ದ ಸಾಹಿತ್ಯಗಳೂ ಬೇಕಾದಷ್ಟಿವೆ. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಪ್ರಯತ್ನಗಳು ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ ಎಂಬುವುದು ನಿಜವೇ ಆಗಿದ್ದರೂ ಅದಕ್ಕೆ ಬೇಕಾದಂತಹ ಪ್ರಯತ್ನಗಳನ್ನು ಮಾನವ ಪ್ರೇಮಿಗಳು ಮಾಡುತ್ತಿರುವುದಂತೂ ಸತ್ಯ. ಕ್ರಮೇಣ ಕನ್ನಡ ನಾಡು ಕವಿಗಳು ಕಂಡ ಚೆಲುವ ಕನ್ನಡ ನಾಡಾಗಲಿ. ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಬಾಡುತ್ತಿರುವ ಸ್ನೇಹದ ಹೂವು ಮತ್ತೆ ಅರಳಲಿ ಎಂದು ಹಾರೈಸೋಣ. ಜೊತೆ ಜೊತೆಗೆ ನಾವುಗಳೂ ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಮುಂದಾಗೋಣ... ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ...

ನಮ್ಮನ್ನಗಲಿದ ಖ್ಯಾತ ಚಿತ್ರಕಲಾ ಶಿಕ್ಷಕ ಬಿ.ಜಿ.ಮಹಮ್ಮದ್.. (ಒಂದು ನೆನಪು)

ಬಿ.ಜಿ.ಮಹಮ್ಮದ್ ದಕ್ಷಿಣ ಕನ್ನಡ ಜಿಲ್ಲೆಯ ಕಲಾಲೋಕದಲ್ಲೊಂದು ಚಿರಪರಿಚಿತ ಹೆಸರು.ಚಿತ್ರಕಲೆಯನ್ನು ತನ್ನ ಹವ್ಯಾಸವನ್ನಾಗಿಸಿ ಜೊತೆಗೆ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಎಂಬ ಚಿತ್ರಕಲಾ ಶಾಲೆಯನ್ನು ಮಂಗಳೂರಿನ ಕದ್ರಿಯಲ್ಲಿ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿಯನ್ನು ನೀಡಿ ಅಸಂಖ್ಯಾತ ಶಿಷ್ಯರನ್ನು ಸಂಪಾದಿಸಿದ ಬಿ.ಜಿ.ಮಹಮ್ಮದರು ಇತ್ತೀಚಿಗೆ ಅಂದರೆ ಕೆಲವು ತಿಂಗಳ ಹಿಂದೆ ನಿಧನರಾದರು. ಅವರ ಕುರಿತು ಕಿರು ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆ .



ಮಂಗಳೂರಿನ ಸರ್ಕಾರಿ ವೈದ್ಯರಾಗಿದ್ದ ಡಾ: ಮಹಮ್ಮದಾಲಿ ಮತ್ತು ರಹೀಮಾಬಿಯವರ ಮಗನಾಗಿ ಅಕ್ಟೋಬರ್ 11ನೆಯ ತಾರೀಖು 1920 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಬಿ.ಜಿ.ಮಹಮ್ಮದರ ಪೂರ್ಣ ಹೆಸರು ಬೋಳೂರು ಗುಲಾಂ ಮಹಮ್ಮದ್.ಚಿಕ್ಕಂದಿನಿದಲೂ ಚಿತ್ರಕಲೆಯಡೆಗೆ ಆಕರ್ಷಿತರಾಗಿದ್ದ ಬಿ.ಜಿ.ಮಹಮ್ಮದರು ಎಸ್.ಎಸ್.ಎಲ್.ಸಿ.ವಿಧ್ಯಾಬ್ಯಾಸದ ನಂತರ ಉಡುಪಿಯ ಖ್ಯಾತ ಚಿತ್ರಕಲಾ ಗುರುಗಳಾಗಿದ್ದ ಪಡುಕೋಣೆ ಶ್ರೀನಿವಾಸ ರಾವ್ ರವರ ಕಲಾಶಾಲೆಯಲ್ಲಿ ತರಬೇತಿ ಪಡೆದು ಅವರ ಅಚ್ಚುಮೆಚ್ಚಿನ ಶಿಷ್ಯರಾದರು.ಆನಂತರ ಚಿತ್ರಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸತೊಡಗಿದ ಬಿ.ಜಿ.ಮಹಮ್ಮದರು ಅಸಂಖ್ಯಾತ ಚಿತ್ರಗಳನ್ನು ಬಿಡಿಸುವುದರ ಮೂಲಕ ತನ್ನ ಜೀವನವನ್ನು ಕಲಾ ಸೇವೆಗೆ ಮುಡಿಪಾಗಿಟ್ಟರು.
1967ರಲ್ಲಿ ಮೈಸೂರಿನ ಅಖ್ತರ್ ಬೇಗಂ ಎಂಬುವವರನ್ನು ವಿವಾಹವಾದ ಇವರಿಗೆ ಮೂವರು ಗಂಡು ಮಕ್ಕಳು.ಹಿರಿಯ ಮಗ ಶಬ್ಬಿರ್ ಅಲಿ ಚಿಲಿಂಬಿ ಎಂಬಲ್ಲಿ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಚಿತ್ರಕಲಾ ತರಬೇತಿ ನೀಡುತಿದ್ದರೆ ಮತ್ತೊಬ್ಬ ಮಗ ಸಮೀರ್ ಅಲಿ ಕದ್ರಿಯ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಅನ್ನು ಮುನ್ನಡೆಸುತಿದ್ದಾರೆ.ಇವರ ಮತ್ತೊಬ್ಬ ಮಗ ಕಬೀರ್ ಅಲಿ ಆರ್ಕಿಟೆಕ್ ಡಿಸೈನರ್ ಆಗಿದ್ದಾರೆ.


ತುಂಬು ಸಂಸಾರದಲ್ಲಿ ಬಾಳಿ ಬದುಕಿದ ಬಿ.ಜಿ.ಮಹಮ್ಮದರು ಚಿತ್ರಕಲಾ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ಇದುವರೆಗೆ 40,000 ಕ್ಕಿಂತಲೂ ಹೆಚ್ಚು ವಿಧ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡಿದ್ದು ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಲಾವಿದರಲ್ಲೊಬ್ಬರಾದ ಬಿ.ಜಿ.ಮಹಮ್ಮದರ ನಿಧನ ಚಿತ್ರ ಕಲಾಲೋಕಕ್ಕೊಂದು ತುಂಬಲಾರದ ನಷ್ಟ ಎಂದೇ ಹೇಳಬಹುದು.