ಶುಕ್ರವಾರ, ಮೇ 28, 2010

ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಮತ್ತು ಮುಸ್ಲಿಂ ಮೀಸಲಾತಿ ..


ಆಂಧ್ರ ಹೈಕೋರ್ಟ್ ಆಂಧ್ರ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಲು ಉದ್ದೇಶಿಸಿದ್ದ ಶೇಕಡ ನಾಲ್ಕರ ಮೀಸಲಾತಿಯನ್ನು ರದ್ದು ಪಡಿಸುತಿದ್ದಂತೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟ್ ಸರಕಾರ ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇಕಡ ಹತ್ತರಷ್ಟು ಮೀಸಲಾತಿಯನ್ನು ನೀಡುವುದಾಗಿ ಪ್ರಕಟಿಸಿದೆ. ಸಾಚಾರ್ ಸಮಿತಿಯ ಜಾರಿಗೆ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಕೆಲ ಪ್ರಗತಿಪರ ಮಾನವ ಹಕ್ಕು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವಂತೆ ಪಶ್ಚಿಮ ಬಂಗಾಳದ ಅಪ್ಪಟ ಧರ್ಮ ನಿರಪೇಕ್ಷ ಕಮ್ಯುನಿಷ್ಟ್ ಸಿದ್ಧಾಂತದ ಸರಕಾರ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಪ್ರಕಟಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಒಂದು ರೀತಿಯ ಕುತೂಹಲದ ಜೊತೆಗೆ ವಿವಾದವನ್ನೂ ಮೂಡಿಸಿದೆ.


ಆಶ್ಚರ್ಯ ಆಗುವುದು ಅದಲ್ಲ. ಇದುವರೆಗೆ ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದ ಗದ್ದುಗೆಯನ್ನಾಲಿದ ಈ ಸರ್ಕಾರ ಇದುವರೆಗೆ ಮುಸ್ಲಿಂ ಮೀಸಲಾತಿಯ ಬಗ್ಗೆ ಸೊಲ್ಲೆತ್ತದೆ ಈಗ ಏಕಾಏಕಿ ಮೀಸಲಾತಿ ನೀಡುವುದಾಗಿ ಘೋಷಿಸಿರುವುದು. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದೆ. ಕಮ್ಯುನಿಷ್ಟರ ಭದ್ರ ಕೋಟೆಗಳು ಮಮತಾ ಬ್ಯಾನರ್ಜಿಯ ವರ್ಚಸ್ಸಿನ ಮುಂದೆ ಈಗಾಗಲೇ ಅಲುಗಾಡತೊಡಗಿವೆ. ಬಂಡವಾಳಶಾಹಿಗಳ ವಿರೋಧಿಗಳಾಗಿದ್ದ ಕಮ್ಯುನಿಷ್ಟರು ನಂದಿ ಗ್ರಾಮದಲ್ಲಿ ಟಾಟಾ ಕಂಪೆನಿಯ ನ್ಯಾನೋ ಘಟಕಕ್ಕೆ ರೈತರ ಫಲವತ್ತಾದ ಜಾಗ ಕೊಡುವ ಭರದಲ್ಲಿ ಅಲ್ಲಿನ ರೈತರ ಮೇಲೆ ನಡೆಸಿದ ಅಧಿಕಾರಿಕ ದಾಳಿ ಇದೆಯಲ್ಲ ಅದು ಇಡೀ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರೋಧಿ ಅಲೆಯನ್ನು ಎಬ್ಬಿಸಿದೆ. ಅದೂ ಅಲ್ಲದೆ ನಂದಿಗ್ರಾಮ ಮುಸ್ಲಿಂ ಬಾಹುಳ್ಯದ ಪ್ರದೇಶ. ಅಲ್ಲಿ ಪೋಲಿಸ್ ದೌರ್ಜನ್ಯದಿಂದ ಸಂತ್ರಸ್ತರಾದವರು ಮತ್ತು ಸತ್ತವರಲ್ಲಿ ಹೆಚ್ಚಿನವರು ಮುಸ್ಲಿಮರು. ಇದು ಸಹಜವಾಗಿ ಮುಸ್ಲಿಮರನ್ನು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಜೊತೆಗೆ ಸಾಚಾರ್ ಸಮಿತಿಯ ವರದಿಯಲ್ಲಿ ದೇಶದಲ್ಲೇ ಮುಸ್ಲಿಮರು ಅತೀ ಹೆಚ್ಚು ಹಿಂದುಳಿದಿರುವ ರಾಜ್ಯ ಪಶ್ಚಿಮ ಬಂಗಾಳ ಎಂದು ಸ್ಪಷ್ಟವಾಗಿ ಹೇಳಿರುವುದು ಇದುವರೆಗೆ ಅಲ್ಲಿನ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಅನುಷ್ಠಾನಕ್ಕೆ ವಹಿಸಿದ ಮುತುವರ್ಜಿಯನ್ನು ನೇರವಾಗಿ ಜನರ ಮುಂದೆ ತೆರೆದಿಟ್ಟಿದೆ.


ಇವೆಲ್ಲಾ ಕಳೆದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಕಮ್ಯುನಿಷ್ಟರು ನಿರಂತರವಾಗಿ ಗೆದ್ದು ಬರುತಿದ್ದ ಸ್ಥಾನಗಳಲ್ಲಿ ಕಮ್ಯುನಿಷ್ಟ್ ವಿರೋಧಿಗಳಾದ ಮಮತಾ ಬ್ಯಾನರ್ಜಿಯ ತಂಡ ಭರ್ಜರಿ ಜಯ ದಾಖಲಿಸಿದೆ. ಜೊತೆಗೆ ಮಾವೋವಾದಿಗಳೂ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಕಮ್ಯುನಿಷ್ಟ್ ಸಿದ್ಧಾಂತದ ಅಡಿ ಬೇರುಗಳಂತಹ ನಾಯಕರನ್ನೇ ಪಕ್ಷದಿಂದ ದೂರ ಹೋಗುವಂತೆ ಮಾಡಿದೆ. ಹೀಗೆಲ್ಲಾ ಇರುವಾಗ ಪುನಃ ಪಕ್ಷದತ್ತ ಮುಸ್ಲಿಮರನ್ನು ಸೆಳೆಯಲು ಸಿಕ್ಕ ಅಸ್ತ್ರವೇ ಶೇಕಡಾ ಹತ್ತರ ಮೀಸಲಾತಿ.


ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡುವುದು ತಪ್ಪಲ್ಲ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರಿಗೆ ಮೀಸಲಾತಿ ನೀಡುತ್ತಾ ಹೇಳಿದ್ದರು ಮೀಸಲಾತಿ ಶೋಷಿತ ಜನಾಂಗಕ್ಕೆ ಭಿಕ್ಷೆ ಅಲ್ಲ. ಅದು ಅವರ ಹಕ್ಕು ಎಂದು. ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯವನ್ನು ಮೇಲೆತ್ತಲು ಮೀಸಲಾತಿ ಅವಶ್ಯಕ. ಅದು ಆಯಾ ಜನಸಂಖ್ಯೆಯ ಪ್ರಮಾಣಕ್ಕೆ ಅನುಸರಿಸಿ ಆಗಿರಬೇಕು. ಆದರೆ ಅದು ಭಾರತದಲ್ಲಿ ಇದುವರೆಗೆ ಆಗಿಲ್ಲ. ಶೇಕಡಾ ೪೦ ರಷ್ಟಿರುವ ದಲಿತರಿಗೆ ಶೇಕಡಾ ೪೦ ರಷ್ಟು ಮೀಸಲಾತಿ ಕೊಟ್ಟರೆ ಶೇ ೧೩ ರಷ್ಟಿರುವ ಮುಸ್ಲಿಮರಿಗೆ ಶೇ ೧೩ ರಷ್ಟು ಶೇ ೪ ರಷ್ಟಿರುವ ಬ್ರಾಹ್ಮಣರಿಗೆ ಶೇ ೪ ರಷ್ಟು ಶೇ ೨೨ ರಷ್ಟಿರುವ ಹಿಂದುಳಿದವರಿಗೆ ಶೇ ೨೨ ರಷ್ಟು ಶೇ ೨ ರಷ್ಟಿರುವ ಕ್ರೈಸ್ತರಿಗೆ ಶೇ ೨ ರಷ್ಟು ಹೀಗೆ ಆಯಾ ಜಾತಿಯ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕೊಡಬೇಕು. ಅದು ನ್ಯಾಯ ಕೂಡ. ಆ ಮೂಲಕ ಸಮಾಜದ ಎಲ್ಲಾ ವರ್ಗಗಳು ತಮ್ಮ ಪಾಲನ್ನು ಪಡೆಯಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಈಗ ನಡೆಯುತ್ತಿರುವ ಮೀಸಲಾತಿ ರಾಜಕೀಯ ಇದೆಯಲ್ಲ ಅದು ನಂದಿ ಗ್ರಾಮ ಘಟನೆಯಿಂದ ದೂರ ಹೋದ ಮುಸ್ಲಿಮರನ್ನು ಪಕ್ಷಕ್ಕೆ ಸೆಳೆಯುವ ತಂತ್ರವೇ ಹೊರತು ಇನ್ನೇನೂ ಅಲ್ಲ.



- ಅಶ್ರಫ್ ಮಂಜ್ರಾಬಾದ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ